ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಕೇಂದ್ರ ಸರ್ಕಾರದ ‘ತಟಸ್ಥ’ ನಿಲುವನ್ನು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಬೆಂಬಲಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ ಪ್ರಧಾನಿ ಮೋದಿ ಸರ್ಕಾರದ ವಿದೇಶಾಂಗ ನೀತಿಗಳನ್ನು ಟೀಕಿಸುವ ಕಾಂಗ್ರೆಸ್ ನಾಯಕರ ನಡುವೆ, ತಿವಾರಿ ಅವರ ಈ ಸಮರ್ಥನೆ ಗಮನಾರ್ಹವಾಗಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ಭಾರತವು ಯಾವುದೇ ಒಂದು ದೇಶದ ಪರ ವಹಿಸದೆ ಮೌನವಾಗಿರುವುದು ಮತ್ತು ಎಚ್ಚರಿಕೆಯ ಹೆಜ್ಜೆ ಇಡುತ್ತಿರುವುದು ಸರಿಯಾದ ಕ್ರಮ ಎಂದು ತಿವಾರಿ ಹೇಳಿದ್ದಾರೆ.
ಈ ಬಿಕ್ಕಟ್ಟಿನ ಸಂಕೀರ್ಣತೆಯನ್ನು ವಿವರಿಸಿದ ಅವರು, “ಇದು ನಮ್ಮ ಯುದ್ಧವಲ್ಲ, ಹಾಗಾಗಿ ನಾವು ಇದರಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಮಧ್ಯಪ್ರಾಚ್ಯದ ವಿಷಯದಲ್ಲಿ ಭಾರತವು ಮೊದಲಿನಿಂದಲೂ ಸೀಮಿತ ಪಾತ್ರವನ್ನೇ ವಹಿಸುತ್ತಾ ಬಂದಿದೆ. ಈಗಿನ ರಾಜತಾಂತ್ರಿಕ ವಿಧಾನವು ಆ ಇತಿಹಾಸಕ್ಕೆ ಪೂರಕವಾಗಿದೆ ಎಂಬುದು ಅವರ ಅಭಿಪ್ರಾಯ.
ಒಂದು ಕಡೆ ಕಾಂಗ್ರೆಸ್ನ ಪ್ರಮುಖ ನಾಯಕರು ಸರ್ಕಾರದ ನಡೆಯನ್ನು ಪ್ರಶ್ನಿಸುತ್ತಿದ್ದರೆ, ತಿವಾರಿ ಅವರು ದೇಶದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.



