ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹಾವೇರಿಯ ರಾಣೇಬೆನ್ನೂರು ಸಮೀಪದ ಮಲ್ಲೇಶ್ವರ ಗುಡ್ಡಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ.
ಆರೇಮಲ್ಲಾಪುರ ಹಾಗೂ ಐರಣಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಮಲ್ಲೇಶ್ವರ ಗುಡ್ಡಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ, ಕ್ಷಣಾರ್ಧದಲ್ಲಿ ಇಡೀ ಅರಣ್ಯಧಾಮವನ್ನು ಆವರಿಸಿದೆ. ಇದರ ಪರಿಣಾಮ ಅಪರೂಪದ ಸಂಪದ್ಭರಿತ ವನಸ್ಪತಿ ಗಿಡಮೂಲಿಕೆಗಳು ಬೆಂಕಿಗೆ ನಾಶವಾಗಿದೆ.
ಈ ಅರಣ್ಯದಲ್ಲಿ ಕೃಷ್ಣಮೃಗಗಳು ಸಹಿತ ಅನೇಕ ಪ್ರಾಣಿ-ಪಕ್ಷಿಗಳ ವಾಸಸ್ಥಾನವಾಗಿದ್ದು, ಬೆಂಕಿಯ ಕೆನ್ನಾಲಿಗೆ ವನ್ಯಜೀವಿಗಳು ಪ್ರಾಣಭಯದಲ್ಲಿ ದಿಕ್ಕಾಪಾಲಾಗಿ ಓಡುತ್ತಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.



