ಹೊಸದಿಗಂತ ವರದಿ ವಿಜಯಪುರ:
ಹಿಜಾಬ್ ಗೆ ಅನುಮತಿ ನೀಡಿರುವ ಸರ್ಕಾರದ ಕ್ರಮ ವಿರೋಧಿಸಿ ನಗರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಂಚಲು ಯತ್ನಿಸಿದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ರನ್ನು ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು.
ಶಾಲೆ ಬಳಿ ಬಿಗುವಿನ ವಾತಾವರಣ
ನಗರದ ದರಬಾರ ಹೈಸ್ಕೂಲ್ ಕ್ರಾಸ್ ಬಳಿಯ ಸ್ಟೇಶನ್ ರಸ್ತೆಯಲ್ಲಿ ಕೇಸರಿ ಶಾಲು ಹಂಚಲು ಯತ್ನಿಸುತ್ತಿದ್ದ ಯತ್ನಾಳ್ ಹಾಗೂ ಅವರ ಬೆಂಬಲಿಗರನ್ನು ಪೊಲೀಸರು ತಡೆದಿದ್ದು, ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
‘ಹಿಜಾಬ್ಗೆ ಅವಕಾಶವಿದ್ದರೆ ಕೇಸರಿಗೂ ಅವಕಾಶ ಇರಲಿ’
ಬಳಿಕ ಈ ಕುರಿತು ಯತ್ನಾಳ್ ಪ್ರತಿಕ್ರಿಯಿಸಿ, ಹಿಜಾಬ್ ಗೆ ಅವಕಾಶ ಕೊಡೊದಾದರೆ ಕೇಸರಿ ಶಾಲಿಗೆ ಅವಕಾಶ ಕೊಡಬೇಕು. ಶಿಸ್ತಿನ ಪ್ರತೀಕವಾಗಿ ಶಾಲಾ ಸಮವಸ್ತ್ರ ಇದೆ ಎಂದರು.
ಹೋರಾಟ ಮುಂದುವರಿಸುವ ಎಚ್ಚರಿಕೆ
ಸಿದ್ದರಾಮಯ್ಯ ತಮ್ಮ ಕೊನೆ ದಿನಗಳಲ್ಲಿ ಹಿಜಾಬ್ ಗೆ ಪರವಾನಿಗೆ ನೀಡಿದರು. ಹಿಜಾಬ್ ಅನುಮತಿ ವಾಪಸ್ ಪಡೆಯಲಿ ಎಂದು ನಮ್ಮ ಮಕ್ಕಳಿಗೆ ಕೇಸರಿ ಶಾಲು ಹಾಕಲು ಹೋಗಿದ್ವಿ. ಇನ್ನೂ ನಾವೆಲ್ಲ ಸೇರುವಾಗಲೇ ಬಂಧಿಸಿದ್ದಾರೆ. ವಾಹನ ಇಳಿಯೋದಕ್ಕೆ ಮೊದಲೇ ಪೊಲೀಸರು ಬಂಧನ ಮಾಡಿದ್ದಾರೆ. ಅಪರಾಧಿಗಳ ಜೊತೆಗೆ ನಡೆದುಕೊಳ್ಳುವಂತೆ ನಡೆದುಕೊಂಡಿದ್ದಾರೆ ಎಂದು ದೂರಿದರು.
ರಾಜ್ಯ ಸರ್ಕಾರ ಪೊಲೀಸ್ ಇಲಾಖೆ ದುರ್ಬಳಿಕೆ ಮಾಡಿಕೊಂಡಿದೆ. ನಾವು ಶಾಂತ ರೀತಿಯ ಹೋರಾಟ ಮಾಡುತ್ತಿದ್ವಿ. ರಾಜ್ಯದಲ್ಲಿ ಶಾಲು, ಕುಂಕುಮ ಧರಿಸೋದು ಅಪರಾಧವಾ? ಎಂದರು.
ಇದನ್ನೂ ಓದಿ:
ಇದೆ ರೀತಿ ಮಾಡಿದರೆ ಬಂಗಾಳದಂತೆ ರಾಜ್ಯದಲ್ಲೂ ಕಾಂಗ್ರೆಸ್ ಧೂಳಿಪಟವಾಗಲಿದೆ. 2028 ಕ್ಕೆ ಕಾಂಗ್ರೆಸ್ ಧೂಳಿಪಟವಾಗಲಿದೆ. ಇಲ್ಲಿ ಡಾ. ಬಾಬಾಸಾಹೇಬರ ಸಂವಿಧಾನ ನಡೆಯುತ್ತೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಂವಿಧಾನ ನಡೆಯಲ್ಲ. ಮುಸ್ಲಿಂ ತುಷ್ಟೀಕರಣಕ್ಕೆ ಏನ್ ಬೇಕಾದ್ರು ಮಾಡಿದ್ರೆ ನಡೆಯೋಲ್ಲ ಎಂದರು.
ಹಿಂದೂಗಳ ಹೋರಾಟ, ಆರ್ ಎಸ್ ಎಸ್ ಚಟುವಟಿಕೆ, ಹಿಂದೂಪರ ಹಬ್ಬಗಳಲ್ಲಿ ತೊಂದರೆ ಮಾಡಿದರೆ ಸುಮ್ಮನಿರಲ್ಲ. ಹುಷಾರ್, ನಾವು ಜೈಲಿಗೆ ಹೋಗೋದಕ್ಕು ರೆಡಿ ಇದ್ದೇವೆ, ರಾಜ್ಯದಲ್ಲಿ ಧಂಗೆ ಎಳುತ್ತದೆ, ಇದು ಇಲ್ಲಿಗೆ ನಿಲ್ಲೋದಿಲ್ಲ ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳಿಗೆ ಕರೆ
ಎಲ್ಲರೂ ಸ್ವಯಂ ಪ್ರೇರಿತರಾಗಿ ಕೇಸರಿ ಶಾಲು ಧರಿಸಿ ಹೋಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಯತ್ನಾಳ, ಹಿಜಾಬ್ ಆದೇಶ ವಾಪಸ್ ಪಡೆಯೋ ವರೆಗೂ ಹೋರಾಟ ಎಂದರು.



