ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಯೋತ್ಪಾದನೆಯನ್ನು ಪೋಷಿಸಿ ಬೆಳೆಸುತ್ತಿರುವ ಪಾಕಿಸ್ತಾನದಲ್ಲಿ ಈಗ ಉಗ್ರರಿಗೇ ರಕ್ಷಣೆ ಇಲ್ಲದಂತಾಗಿದೆ. ಕುಖ್ಯಾತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಕಮಾಂಡರ್ ಬಿಲಾಲ್ ಆರಿಫ್ ಸರಾಫಿಯನ್ನು ಆತನ ಸ್ವಂತ ಕುಟುಂಬಸ್ಥರೇ ಚಾಕುವಿನಿಂದ ಇರಿದು, ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಪಾಕಿಸ್ತಾನದಲ್ಲಿ ಈದ್ ಪ್ರಾರ್ಥನೆ ಮುಗಿದ ಬೆನ್ನಲ್ಲೇ ಈ ಹತ್ಯೆ ನಡೆದಿದೆ. ಮುರಿಡ್ಕೆಯ ಮರ್ಕಜ್ ಬಳಿಯಿರುವ ಲಷ್ಕರ್-ಎ-ತೊಯ್ಬಾ ಪ್ರಧಾನ ಕಚೇರಿಯ ಸಮೀಪವೇ ಸರಾಫಿಯನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಇದೊಂದು ಕೌಟುಂಬಿಕ ಕಲಹ ಎನ್ನಲಾಗಿದ್ದು, ಈ ಸಂಬಂಧ ಕೊಲೆಯಲ್ಲಿ ಭಾಗಿಯಾದವರನ್ನು ಪೊಲೀಸರು ಬಂಧಿಸಿದ್ದಾರೆ.
ಹತ್ಯೆಯಾದ ಬಿಲಾಲ್ ಸರಾಫಿ ಕೇವಲ ಕಮಾಂಡರ್ ಆಗಿರಲಿಲ್ಲ, ಬದಲಾಗಿ ಲಷ್ಕರ್ ಸಂಘಟನೆಗೆ ಯುವಕರನ್ನು ನೇಮಕ ಮಾಡುವ ಪ್ರಮುಖ ದಲ್ಲಾಳಿಯಾಗಿದ್ದ. ಮುಗ್ಧ ಯುವಕರನ್ನು ಗುರುತಿಸಿ, ಅವರಿಗೆ ಸೈದ್ಧಾಂತಿಕ ತರಬೇತಿ ನೀಡುವ ಮೂಲಕ ಅವರ ‘ಮೈಂಡ್ ವಾಶ್’ ಮಾಡಿ ಭಯೋತ್ಪಾದನೆಯ ಹಾದಿಗೆ ತಳ್ಳುವುದು ಈತನ ಕೆಲಸವಾಗಿತ್ತು.
ದಶಕಗಳಿಂದ ಭಯೋತ್ಪಾದನೆಯನ್ನು ತನ್ನ ವಿದೇಶಾಂಗ ನೀತಿಯ ಭಾಗವಾಗಿ ಬಳಸಿಕೊಂಡಿದ್ದ ಪಾಕಿಸ್ತಾನಕ್ಕೆ ಈಗ ಅದೇ ತಿರುಗುಬಾಣವಾಗಿದೆ. ಜಾಗತಿಕ ಭಯೋತ್ಪಾದನಾ ಸೂಚ್ಯಂಕ 2026 ರ ವರದಿಯ ಪ್ರಕಾರ, ಪಾಕಿಸ್ತಾನವು ಮೊದಲ ಬಾರಿಗೆ ವಿಶ್ವದ ಅತ್ಯಂತ ಭಯೋತ್ಪಾದನಾ ಪೀಡಿತ ದೇಶವಾಗಿ ಹೊರಹೊಮ್ಮಿದೆ.



