ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾವಿನ ಇಟಗಿ ಗ್ರಾಮದ ಸೋಮಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದ್ದ ನಿಧಿ ಕಳ್ಳತನ ಪ್ರಕರಣದಲ್ಲಿ ಪ್ರಮುಖ ಆರೋಪಿಯೊಬ್ಬ ಪಶ್ಚಾತಾಪದಿಂದ ಪೊಲೀಸರ ಮುಂದೆ ಶರಣಾಗಿರುವ ಘಟನೆ ನಡೆದಿದೆ.
ಇಳಕಲ್ ನಿವಾಸಿಯಾದ 45 ವರ್ಷದ ಮೌಲಾಸಾಬ್ ಮುಜಾವರ್ ಈ ಪ್ರಕರಣದ ಆರೋಪಿ.
ಎರಡು ವರ್ಷಗಳ ಹಿಂದೆ ಹಣದ ಆಸೆಗೆ ಒಳಗಾಗಿ ಇತರ ಮೂವರು ವ್ಯಕ್ತಿಗಳೊಂದಿಗೆ ಸೇರಿ ದೇವಸ್ಥಾನದ ಗರ್ಭಗುಡಿಯಲ್ಲಿ ನೆಲವನ್ನು ಅಗೆದು ನಿಧಿಯನ್ನು ದೋಚಿದ್ದಾರೆ. ಆ ಸಂದರ್ಭದಲ್ಲಿ ಚಿನ್ನದ ನಾಣ್ಯಗಳು ಹಾಗೂ ಬೆಳ್ಳಿ ಆಭರಣಗಳು ಸಿಕ್ಕಿದ್ದವು ಎಂದು ತಿಳಿದುಬಂದಿದೆ.
ಘಟನೆಯ ನಂತರ ಮೌಲಾಸಾಬ್ ಜೀವನದಲ್ಲಿ ಅನೇಕ ಸಂಕಷ್ಟಗಳು ಎದುರಾದವು ಎಂದು ಹೇಳಲಾಗಿದೆ. ಆರೋಗ್ಯ ಸಮಸ್ಯೆಗಳು, ಕುಟುಂಬದಲ್ಲಿ ಅಶಾಂತಿ ಹಾಗೂ ಆರ್ಥಿಕ ಕಷ್ಟಗಳು ಹೆಚ್ಚಾಗಿದ್ದರಿಂದ ಆತ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾನೆ. ಜೊತೆಗೆ, ಜೊತೆಗಾರರಿಂದ ಮೋಸವಾದ ಕಾರಣ ಕದ್ದ ಸಂಪತ್ತಿನ ಲಾಭವೂ ಸಿಗಲಿಲ್ಲ.
ಇದನ್ನೂ ಓದಿ:
ತಾನು ಮಾಡಿದ ತಪ್ಪಿನ ಪರಿಣಾಮವೇ ಈ ಸಂಕಷ್ಟಗಳು ಎಂದು ನಂಬಿದ ಮೌಲಾಸಾಬ್, ಕೊನೆಗೆ ಕುಷ್ಟಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಪೊಲೀಸರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡು ಪಶ್ಚಾತಾಪ ವ್ಯಕ್ತಪಡಿಸಿದ್ದಾನೆ.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇತರ ಆರೋಪಿಗಳಿಗಾಗಿ ತನಿಖೆ ಮುಂದುವರಿಸಿದ್ದಾರೆ.



