ಹೊಸದಿಗಂತ ವರದಿ,ಅಂಕೋಲಾ:
ಅಕ್ರಮ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯೊಂದನ್ನು ತಾಲೂಕಿನ ತಳಗದ್ದೆ ಕ್ರಾಸ್ ಬಳಿ ಅಂಕೋಲಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಓರ್ವನನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.
ಮೇಲುಗಡೆ ಭತ್ತದ ಚೀಲಗಳನ್ನು ಹಾಕಿ ಕೆಳಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಪಡಿತರ ಅನ್ನಭಾಗ್ಯ ಅಕ್ಕಿಯನ್ನು ಮೂಟೆಗಳಲ್ಲಿ ತುಂಬಿ ಸಾಗಿಸಲಾಗುತಿತ್ತು ಎಂದು ತಿಳಿದು ಬಂದಿದೆ.
ಕೆ.ಎ22 ಎಎ7127 ನೋಂದಣಿ ಸಂಖ್ಯೆಯ ಲಾರಿಯಲ್ಲಿ ತಾಲೂಕಿನ ವಂದಿಗೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ವ್ಯಕ್ತಿಯೋರ್ವರ ಗೋಡೌನ್ ನಲ್ಲಿ ಸಂಗ್ರಹಿಸಿಟ್ಟ ಪಡಿತರ ಅಕ್ಕಿ ಚೀಲಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಲಾಗಿದೆ.
ಸ್ಥಳಕ್ಕೆ ಕಾರವಾರ ಡಿ.ವೈ.ಎಸ್.ಪಿ ಗಿರೀಶ ಭೇಟಿ ನೀಡಿ ಮಾಹಿತಿ ಪಡೆದಿದ್ದು ಉಪ ತಹಸೀಲ್ದಾರ ಗಿರೀಶ ಜಾಂಬಾವಳಿಕರ್ ಕಂದಾಯ ಇಲಾಖೆಯ ಸಿಬ್ಬಂದಿಗಳು,ಪೊಲೀಸ್ ಉಪ ನಿರೀಕ್ಷಕ ಗುರುನಾಥ ಹಾದಿಮನಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಲಾರಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಕ್ಕಿ ಚೀಲಗಳ ಸಾಗಾಟ ನಡೆಯುತಿತ್ತು ಎಂದು ತಿಳಿದು ಬಂದಿದ್ದು ಆರೋಪಿತರ ಕುರಿತ ಮಾಹಿತಿ, ಸಾಗಿಸುತ್ತಿದ್ದ ಅಕ್ಕಿ ಪ್ರಮಾಣ ಮತ್ತು ಮೌಲ್ಯ ಮತ್ತಿತರವಿವರಗಳು ಲಭ್ಯವಾಗಬೇಕಿದೆ.



