ಹೊಸದಿಗಂತ ವರದಿ ಅಂಕೋಲಾ:
ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಅವರ ಹತ್ಯಾಯತ್ನಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ತನಿಖೆ ಚುರುಕುಗೊಂಡಿದ್ದು ಈ ಕೃತ್ಯದ ಮಾಸ್ಟರ್ ಮೈಂಡ್ ಕುರಿತಾಗಿ ಪ್ರಮುಖ ಮಾಹಿತಿ ಕಲೆ ಹಾಕಿರುವುದಾಗಿ ಗೊತ್ತಾಗಿದೆ.
ಕಾರವಾರ ಗೋವಾ ಗಡಿಯಲ್ಲಿ ಬಂಧಿತ ನಾಲ್ಕು ಜನ ಆರೋಪಿಗಳ ವಿಚಾರಣೆ ತೀವ್ರಗೊಂಡಿದ್ದು ಇದರ ಹಿನ್ನೆಲೆಯಲ್ಲಿ ಅಂಕೋಲಾ ಮೂಲದ ಇನ್ನಿಬ್ಬರನ್ನು ಸಹ ವಶಕ್ಕೆ ಪಡೆಯಲಾಗಿರುವ ಮಾಹಿತಿ ಇದ್ದು ವಶಕ್ಕೆ ಪಡೆದ ಎಲ್ಲರಿಂದ ಈ ಹತ್ಯೆಗೆ ಸುಪಾರಿ ನೀಡಿದ ಮೂಲದ ಪ್ರಮುಖ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆಂದು ತಿಳಿದು ಬಂದಿದೆ.
ಇದನ್ನೂ ಓದಿ:
ನಾಯಕ ಅವರ ಮೇಲೆ ನಡೆದ ಹಲ್ಲೆ ಮತ್ತು ಅದರ ನಂತರ ದುಷ್ಕರ್ಮಿಗಳ ಚಲನವಲನಗಳ ಕುರಿತಂತೆ ವಿವಿಧ ಕಡೆಗಳ ಸಿ.ಸಿ ಟಿ.ವಿ ದೃಶ್ಯಾವಳಿಗಳನ್ನು ಪಡೆದು ಮಾಹಿತಿ ಕಲೆಹಾಕಲಾಗುತ್ತಿದ್ದು, ಹಲ್ಲೆಕೋರರು ಹಲ್ಲೆಯ ನಂತರ ವೆಂಕಟರಮಣ ದೇವಾಲಯದ ಎದುರಿನ ಕಾಲುದಾರಿಯಲ್ಲಿ ಯಾವುದೇ ರೀತಿಯ ಗಡಿಬಿಡಿ ಇಲ್ಲದೇ ಮಾತನಾಡುತ್ತ ಹೋಗಿರುವುದು ಕಂಡು ಬಂದಿದ್ದು ಆ ರಸ್ತೆ ಮೂಲಕವೇ ಮುಂದೆ ರಾಷ್ಟ್ರೀಯ ಹೆದ್ದಾರಿ 66 ಕಡೆ ಸಾಗಿದ್ದಾರೆ.
ದುಷ್ಕರ್ಮಿಗಳು ಕೆಲವು ದಿನಗಳಿಂದ ಕನಸೆಗದ್ದೆ ರಸ್ತೆಯಲ್ಲಿರುವ ಅಪಾರ್ಟಮೆಂಟ್ ಒಂದರಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದ್ದು, ಪೊಲೀಸರು ಅಲ್ಲಿ ತೆರಳಿ ಕೆಲವರ ವಿಚಾರಣೆ ನಡೆಸಿರುವುದಾಗಿ ಗೊತ್ತಾಗಿದೆ.
ಗೋಪಾಲಕೃಷ್ಣ ನಾಯಕ ಅವರು ವ್ಯವಹಾರಿಕ ಮತ್ತು ರಾಜಕೀಯ ರಂಗದಲ್ಲಿ ಸಕ್ರಿಯವಾಗಿದ್ದು ಯಾವುದಾದರೂ ದ್ವೇಷದ ಹಿನ್ನೆಲೆಯಲ್ಲಿ ಸುಪಾರಿ ನೀಡಲಾಗಿತ್ತೇ ಎನ್ನುವ ಕುರಿತಂತೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.



