ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಮದ್ಯವ್ಯಸನಿಯೊಬ್ಬ ಮೊಬೈಲ್ ಟವರ್ ಹತ್ತಿ ಧಾಂದಲೆ ಮಾಡಿರುವ ಘಟನೆ ನಡೆದಿದೆ. ಗ್ರಾಮದ ನಿವಾಸಿ ಶ್ರೀಶೈಲ್ ಎಂಬಾತನೇ ಈ ಸಾಹಸಕ್ಕೆ ಕೈಹಾಕಿದ “ಶೂರ”.
ಕುಡಿತದ ಅಮಲಿನಲ್ಲಿರುವ ಶ್ರೀಶೈಲ್, ತನಗೆ ಮದ್ಯದ ಬಾಟಲಿ ನೀಡಿದರೆ ಮಾತ್ರ ಕೆಳಗೆ ಇಳಿಯುವುದಾಗಿ ಪಟ್ಟು ಹಿಡಿದು ಟವರ್ ಏರಿ ಕುಳಿತಿದ್ದಾನೆ. ಇದು ಈತನಿಗೆ ಮೊದಲೇನಲ್ಲ. ಕಳೆದ ಎರಡು ವರ್ಷಗಳಲ್ಲಿ ಈತ ಟವರ್ ಹತ್ತುತ್ತಿರುವುದು ಇದು ಎರಡನೇ ಬಾರಿ. ಹೀಗೆ ಆಗಾಗ ಎತ್ತರದ ಟವರ್ಗಳನ್ನು ಹತ್ತಿ ಜನರನ್ನು ಮತ್ತು ಪೊಲೀಸರನ್ನು ಹೈರಾಣಾಗಿಸುವುದು ಈತನಿಗೆ ಹವ್ಯಾಸವಾಗಿಬಿಟ್ಟಿದೆ.
ವಿಷಯ ತಿಳಿಯುತ್ತಿದ್ದಂತೆಯೇ ತಿಕೋಟಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಲು ಹರಸಾಹಸ ಪಡುತ್ತಿದ್ದಾರೆ.



