ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶನಿವಾರ ಮಧ್ಯಾಹ್ನದ ಬಳಿಕ ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಭಾಗಗಳಲ್ಲಿ ಸುರಿದ ಗಾಳಿ, ಗುಡುಗು, ಸಿಡಿಲು ಸಹಿತದ ಧಾರಾಕಾರ ಮಳೆಗೆ ವಿವಿಧೆಡೆ ಅಪಾರ ಹಾನಿ ಉಂಟಾಗಿದೆ.
ಬೆಳ್ತಂಗಡಿ ನಗರದ ಸಂತೆಕಟ್ಟೆಯಲ್ಲಿ ಗಾಳಿಗೆ ರಿಕ್ಷಾ ಸ್ಟ್ಯಾಂಡ್ ಧರಾಶಾಯಿಯಾಗಿ ರಿಕ್ಷಾ ಒಂದಕ್ಕೆ ಭಾಗಶಃ ಹಾನಿ ಉಂಟಾಗಿದೆ. ತಣ್ಣೀರು ಪಂತ ಗ್ರಾಮದ ಪೆರೊಡಿತ್ತಾಯನ ಕಟ್ಟೆ ಪರಿಸರದಲ್ಲಿ ಭಾರಿ ಗಾಳಿ ಬೀಸಿದ್ದು 20ಕ್ಕಿಂತ ಅಧಿಕ ಮನೆಗಳ ಮೇಲೆ ಮರಗಳು ಬಿದ್ದು, ಶೀಟುಗಳು ಹಾರಿ ಹೋಗಿ ಹೆಚ್ಚಿನ ನಷ್ಟ ಉಂಟಾಗಿದೆ. ನೆರಿಯ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ಮನೆಯೊಂದರ ಶೀಟುಗಳು ಗಳಿಗೆ ಹಾರಿಹೋಗಿವೆ. ಅಲ್ಲಲ್ಲಿ ಮರಗಳು ಬಿದ್ದು ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ 73ರ ಕಕ್ಕಿಂಜೆ ಪೇಟೆಯಲ್ಲಿ ವಿದ್ಯುತ್ ಕಂಬ ರಸ್ತೆಗೆ ಮುರಿದು ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಗಾಳಿ ಮಳೆಯಿಂದಾಗಿ ಈ ಭಾಗದ ಕೃಷಿ ತೋಟಗಳಲ್ಲಿ ನೂರಾರು ಅಡಕೆ, ರಬ್ಬರ್ ಮರಗಳು ಮುರಿದುಬಿದ್ದಿವೆ.



