September 16, 2026
Wednesday, September 16, 2026
spot_img

ಗಲ್ಫ್ ಕಿಚ್ಚಿಗೆ ಕರುನಾಡು ತತ್ತರ: ಸಿಲಿಂಡರ್ ಇಲ್ಲದಿದ್ರೆ ಸೌದೆ ಒಲೆ ಹಚ್ಚಿ ಅಂದ್ರು ಮುನಿಯಪ್ಪ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಲ್ಫ್ ಯುದ್ಧವು 30ನೇ ದಿನಕ್ಕೆ ಕಾಲಿಡುತ್ತಿದ್ದಂತೆ ಕರ್ನಾಟಕದಲ್ಲಿ ಎಲ್‌ಪಿಜಿ ಬಿಕ್ಕಟ್ಟು ತಾರಕಕ್ಕೇರಿದೆ. ವಾಣಿಜ್ಯ ಸಿಲಿಂಡರ್‌ಗಳ ಕೊರತೆಯಿಂದ ಹೋಟೆಲ್ ಮತ್ತು ಕೈಗಾರಿಕೆಗಳು ಸ್ತಬ್ದಗೊಂಡಿದ್ದರೆ, ಸಾರ್ವಜನಿಕರು ಖಾಲಿ ಸಿಲಿಂಡರ್ ಹಿಡಿದು ಏಜೆನ್ಸಿಗಳ ಮುಂದೆ ಕ್ಯೂ ನಿಲ್ಲುವಂತಾಗಿದೆ. ಈ ಪರಿಸ್ಥಿತಿಯ ನಡುವೆ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು “ಸಿಲಿಂಡರ್ ಅಭಾವವಿರುವುದರಿಂದ ಹಳ್ಳಿ ಜನ ಸೌದೆ ಒಲೆ ಬಳಸಿ” ಎಂದು ನೀಡಿರುವ ಸಲಹೆ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಬೆಂಗಳೂರಿನಿಂದ 40 ಕಿ.ಮೀ ದೂರ ಹೋದರೆ ಸೌದೆ ಸಿಗುತ್ತದೆ. ಅರಣ್ಯದ ಹಸಿ ಮರ ಕಡಿಯದೆ, ಒಣ ಕಟ್ಟಿಗೆ ಬಳಸಿ ಅಡುಗೆ ಮಾಡುವಂತೆ ಸಚಿವರು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿನ ಸಿಲಿಂಡರ್ ಕೊರತೆಗೆ ಕೇಂದ್ರ ಸರ್ಕಾರವೇ ನೇರ ಕಾರಣ ಎಂದು ಸಚಿವರು ದೂರಿದ್ದಾರೆ. ಸದ್ಯ ಕೇವಲ ಶೇ. 40ರಷ್ಟು ಪೂರೈಕೆಯಾಗುತ್ತಿದೆ ಎಂದಿದ್ದಾರೆ.

ಅಭಾವ ನೀಗಿಸಲು ಇಂದಿನಿಂದಲೇ ರಾಜ್ಯಾದ್ಯಂತ ಹೆಚ್ಚುವರಿ ವಾಣಿಜ್ಯ ಸಿಲಿಂಡರ್ ವಿತರಣೆ ಆರಂಭಿಸಲಾಗಿದೆ. ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಹೋಟೆಲ್‌ಗಳಿಗೆ ಆದ್ಯತೆಯ ಮೇಲೆ ಒಟ್ಟು 29,463 ಸಿಲಿಂಡರ್‌ಗಳನ್ನು ನಿತ್ಯ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಸಿಲಿಂಡರ್ ಅಕ್ರಮ ದಾಸ್ತಾನು ಮತ್ತು ಹೆಚ್ಚಿನ ಬೆಲೆಗೆ ಮಾರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 1,169 ಕೇಸ್ ದಾಖಲಾಗಿದ್ದು, 1,603 ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !