ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಕದನದ ನಡುವೆ ಗಡಿಯಲ್ಲಿ ಬಾಲ ಬಿಚ್ಚಿದ್ದರೆ ಭಾರತದ ಪ್ರತಿಕ್ರಿಯೆ ಕಠಿಣವಾಗಿರಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೇರಳದಲ್ಲಿ ಆಯೋಜಿಸಿದ ಸೈನಿಕ್ ಸಮ್ಮಾನ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಾರತವನ್ನು ಮತ್ತೆ ಕೆಣಕಿದರೆ ಯಾವುದೇ ಪ್ರಚೋದನೆ ಎದುರಿಸಲು ಸಿದ್ಧವಾಗಿಯೇ ಇದ್ದೇವೆ ಎಂದು ಹೇಳಿದರು.
ಪ್ರಸ್ತುತ ಹೆಚ್ಚುತ್ತಿರುವ ಅನಿಶ್ಚಿತ ಭೌಗೋಳಿಕ ರಾಜಕೀಯ ವಾತಾವರಣದಲ್ಲಿ ನಾವು ರಾಷ್ಟ್ರೀಯ ಭದ್ರತೆ ಮತ್ತು ಹಿತಾಸಕ್ತಿಗಳನ್ನು ಕಾಪಾಡಲು ಸಿದ್ದವಾಗಿದ್ದೇವೆ. ಗಡಿಯಾಚೆಗಿನ ಅನಿರೀಕ್ಷಿತ ಕ್ರಮಗಳ ವಿರುದ್ಧ ಸದಾ ಭಾರತವು ಜಾಗರೂಕವಾಗಿದೆ. ಅಂತಹ ದುಸ್ಸಾಹಸಕ್ಕೆ ಪ್ರಯತ್ನಿಸಿದರೆ ತಕ್ಕ ಉತ್ತರ ನೀಡಲು ಸಿದ್ದವಾಗಿ ಇದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಕುರಿತು ವಿವರಿಸಿದ ಅವರು, ಭಾರತೀಯ ಸೇನೆಯ ದಾಳಿಗೆ ಪಾಕಿಸ್ತಾನ ಕೇವಲ 22 ನಿಮಿಷಗಳಲ್ಲಿ ಮಂಡಿಯೂರಿದೆ . ಮೂರು ದಿನಗಳ ಕಾರ್ಯಾಚರಣೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪಾಕ್ ನ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತು ಎಂದು ತಿಳಿಸಿದರು.
ಇದೇ ವೇಳೆ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ. ಮತ್ತೆ ಭಾರತ ವಿರುದ್ಧ ದಾಳಿಗೆ ಮುಂದಾದ್ರೆ ತಕ್ಕ ಉತ್ತರ ನೀಡಲಾಗುವುದು ಎಂದು ಪಾಕ್ ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.



