ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶಾಖಪಟ್ಟಣಂನ ನೌಕಾ ನೆಲೆಯಲ್ಲಿಂದು ಭಾರತೀಯ ನೌಕಾಪಡೆಯ ಸ್ಟೆಲ್ತ್ ಫ್ರಿಗೇಟ್ ಐ ಎನ್ ಎಸ್ – ತಾರಗಿರಿ ಕಾರ್ಯಾರಂಭ ಮಾಡಿತು.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆ ವಹಿಸಿ ಪಾಲ್ಗೊಂಡಿದ್ದರು. ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಅನಿಲ್ ಚೌಹಾಣ್, ನೌಕಾ ಸಿಬ್ಬಂದಿ ಮುಖ್ಯಸ್ಥ ದಿನೇಶ್ ಕೆ. ತ್ರಿಪಾಠಿ ಮತ್ತು ವೈಸ್ ಅಡ್ಮಿರಲ್ ಸಂಜಯ್ ಭಲ್ಲಾ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ರಾಜನಾಥ್ ಸಿಂಗ್, ಈ ಯುದ್ಧನೌಕೆಯ ಸೇರ್ಪಡೆ ಭಾರತದ ಸ್ಥಳೀಯ ನೌಕಾ ಸಾಮರ್ಥ್ಯ ವೃದ್ದಿಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ಗುರಿ ಸಾಧನೆಗೆ ನೌಕಾ ಸಾಮರ್ಥ್ಯವೂ ಪ್ರಮುಖವಾಗಿದೆ. ಸುಮಾರು 11 ಸಾವಿರ ಕಿಲೋಮೀಟರ್ಗಳಿಗೂ ಅಧಿಕ ಕರಾವಳಿಯನ್ನು ಹೊಂದಿರುವ ದೇಶ, ಮೂರು ಕಡೆ ಸಮುದ್ರದಿಂದ ಆವೃತವಾಗಿದೆ. ಭಾರತದ ವಿದೇಶಿ ವ್ಯಾಪಾರ ಸುಮಾರು ಶೇಕಡಾ 95ರಷ್ಟು ಸಮುದ್ರ ಮಾರ್ಗಗಳ ಮೂಲಕವೇ ನಡೆಯುತ್ತದೆ. ಇಂಧನ ಭದ್ರತೆಯೂ ಸಮುದ್ರಗಳ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಬಲವಾದ ನೌಕಾಪಡೆ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.

ಉದ್ವಿಗ್ನತೆಯ ಅವಧಿಯಲ್ಲಿ ನೌಕಾಪಡೆಯು ವಾಣಿಜ್ಯ ಹಡಗುಗಳು ಮತ್ತು ತೈಲ ಟ್ಯಾಂಕರ್ಗಳನ್ನು ರಕ್ಷಿಸಿದೆ. ಹಿಂದೂ ಮಹಾಸಾಗರ, ಪರ್ಷಿಯನ್ ಕೊಲ್ಲಿ ಮತ್ತು ಮಲಕ್ಕಾ ಜಲಸಂಧಿ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಇದು ನಿರಂತರ ಉಪಸ್ಥಿತಿಯನ್ನು ಕಾಯ್ದುಕೊಳ್ಳುತ್ತಿದೆ. ಅಗತ್ಯವಿದ್ದಾಗ ಕಾರ್ಯಪಡೆ ಸ್ಥಳಾಂತರ ಮತ್ತು ಮಾನವೀಯ ನೆರವು ಕಾರ್ಯಾಚರಣೆಗಳನ್ನು ಸಹ ಮುನ್ನಡೆಸುತ್ತಿದೆ ಎಂದು ಅವರು ಹೇಳಿದರು.
6,670 ಟನ್ ತೂಕದ ತಾರಗಿರಿಯು ಸುಧಾರಿತ ವೈಶಿಷ್ಟ್ಯಗಳು ಮತ್ತು ಆಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳಿಂದ ಕೂಡಿದೆ. ಶೇಕಡಾ 75ಕ್ಕೂ ಹೆಚ್ಚು ಸ್ಥಳೀಯ ವಸ್ತುಗಳೊಂದಿಗೆ ನಿರ್ಮಾಣವಾಗಿರುವ ಇದು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಯ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ ಎಂದರು.



