September 14, 2026
Monday, September 14, 2026
spot_img

ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್: ಪತಿ ಕಳುಹಿಸಿದ್ದ ಮೆಸೇಜ್‌ ರಿಟ್ರೀವ್ ನಲ್ಲಿ ಸ್ಫೋಟಕ ಅಂಶ ಬಯಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾರತ್ತಹಳ್ಳಿ ಖ್ಯಾತ ಚರ್ಮರೋಗ ತಜ್ಞೆ ಕೃತಿಕಾ ರೆಡ್ಡಿ ಅವರ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಮಹತ್ವದ ಸಾಕ್ಷ್ಯಲಭಿಸಿದ್ದು, ಆರೋಪಿ ಮಹೇಂದ್ರ ರೆಡ್ಡಿ ಕಳುಹಿಸಿದ್ದ ಚಾಟ್ ಮೆಸೇಜ್‌ಗಳನ್ನು ಎಫ್‌ಎಸ್‌ಎಲ್ ರಿಟ್ರೀವ್ ಮಾಡಿದೆ.

ಆರಂಭದಲ್ಲಿ ಕೃತಿಕಾ ರೆಡ್ಡಿ ಅವರದ್ದು ಸಹಜ ಸಾವು ಎಂದು ಬಿಂಬಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ದೇಹಕ್ಕೆ ಅನಸ್ತೇಷಿಯಾ ಚುಚ್ಚುಮದ್ದು ನೀಡಿರುವುದು ದೃಢಪಟ್ಟಿತ್ತು. ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು, ಪತಿ ಮಹೇಂದ್ರ ರೆಡ್ಡಿಯೇ ಐವಿ ಫ್ಲ್ಯೂಯೆಡ್ ಮೂಲಕ ಅನಸ್ತೇಷಿಯಾ ನೀಡಿ ಹತ್ಯೆ ಮಾಡಿದ್ದನು ಎಂದು ಪತ್ತೆಹಚ್ಚಿದ್ದು, ಆತನನ್ನು ಬಂಧಿಸಿದ್ದರು.

ಇದೀಗ ಪೊಲೀಸರು ಕೊಲೆಯ ಹಿಂದಿನ ಕಾರಣವನ್ನು ಬಯಲು ಮಾಡಿದ್ದು,, 2022ರಿಂದಲೇ ಪ್ರೀತಿಯಲ್ಲಿದ್ದ ಮಹೇಂದ್ರ 2024ರಲ್ಲಿ ಕೃತಿಕಾ ರೆಡ್ಡಿ ವಿವಾಹವಾಗಿದ್ದನು. ಆದರೆ ಹಣದಾಸೆಗೆ ಹಾಗೂ ಪ್ರೇಯಸಿ ಜೊತೆಗಿರಲು ಪ್ಲಾನ್ ಮಾಡಿಕೊಂಡಿದ್ದ ಆತ ಕೃತಿಕಾ ರೆಡ್ಡಿಯನ್ನು ಹತ್ಯೆ ಮಾಡಿದ್ದಾನೆ. ಈ ಸಂಬಂಧ ಕೃತಿಕಾ ರೆಡ್ಡಿ ಕೊಲೆ ಬಳಿಕ ಮಹೇಂದ್ರ ರೆಡ್ಡಿ ಫೋನ್ ಪೇ ಮೂಲಕ ಪ್ರಿಯತಮೆಗೆ ಕಳುಸಿದ್ದ ಮೆಸೇಜ್ ಅನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ.

ಏನಿತ್ತು ಮೆಸೇಜ್ ನಲ್ಲಿ?

ನೀನಾಗಿ ಮೆಸೇಜ್, ಕರೆ ಯಾವುದರಿಂದಲೂ ಮಾಡಬೇಡ. ಈ ವಿಚಾರವಾಗಿ ಪೊಲೀಸರು ನಿನ್ನ ವಿಚಾರಣೆ ನಡೆಸಿದರೆ ನಾವು ಸ್ನೇಹಿತರು ಅಂತ ಹೇಳು.

ನಾನು ಕೃತಿಕಾಳನ್ನು ಕೊಂದಿದ್ದೇನೆ ಆದರೆ ಯಾವುದೇ ಪುರಾವೆ ಇಲ್ಲ. ನಾನು ಜೈಲಿಗೆ ಹೋಗುತ್ತೇನೆ, ಆಗ ನೀನೂ ಸೇರಿದಂತೆ ಎಲ್ಲರೂ ಸಂತೋಷವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ.

ಕೊಲೆಗಾರ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ನಾನು ಕೊಲೆಗಾರನಾಗಿಯೇ ಜೀವನವನ್ನು ನಡೆಸುತ್ತೇನೆ.

ಹೀಗೆ ಹಲವು ಅಂಶಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು , ಎಫ್‌ಎಸ್‌ಎಲ್ ತಜ್ಞರು ಮಹೇಂದ್ರ, ಕೃತಿಕಾ ಮತ್ತು ಪ್ರೇಯಸಿಯ ಮೊಬೈಲ್‌ಗಳಿಂದ ಸುಮಾರು 10.34 ಲಕ್ಷ ಡಿಜಿಟಲ್ ಫೈಲ್‌ಗಳನ್ನು ರಿಟ್ರೀವ್ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !