ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂನಲ್ಲಿ ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿದ ಬಳಿಕ ನಾಳೆ ಮತದಾನಕ್ಕೆ ಕ್ಷಣಗಣನೆ ಬಾಕಿ ಉಳಿದಿದ್ದು, ಇದರ ನಡುವೆ ಕಾಂಗ್ರೆಸ್ ಗೆ ಶಾಕ್ ಎಂಬಂತೆ ಉದಲ್ಗುರಿ ಕ್ಷೇತ್ರದ ಅಭ್ಯರ್ಥಿ ಸುರೇನ್ ಡೈಮರಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಕಾಂಗ್ರೆಸ್ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸುರೇನ್ ರಾಜೀನಾಮೆ ಘೋಷಿಸಿದ್ದು, ಇದರಿಂದಾಗಿ ಚುನಾವಣಾ ಅಖಾಡಕ್ಕೆ ಇಳಿದ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಸಿಕ್ಕಂತಾಗಿದೆ.
ಸುದ್ದಿಗಾರರ ಜೊತೆ ಮಾತನಾಡಿದ ಸುರೇನ್ ಡೈಮರಿ, ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ನಾಯಕರು ಸೂಕ್ತ ಬೆಂಬಲ ನೀಡಲಿಲ್ಲ. ಪ್ರತಿ ಬಾರಿಯೂ ನಿರ್ಲ್ಯಕ್ಷಿಸಿದ್ದಾರೆ. ಹಾಗಾಗಿ ನಾನು ಪಕ್ಷ ತೊರೆಯುತ್ತೇನೆ ಎಂದು ಹೇಳಿದ್ದಾರೆ.
ಈ ಕುರಿತು ಚುನಾವಣಾ ಆಯೋಗದ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದು, ಈಗಾಗಲೇ ನಾಮಪತ್ರ ಹಿಂತೆಗೆದುಕೊಳ್ಳುವ ಸಮಯ ಮುಗಿದ ಕಾರಣ, ಒಂದೇ ವೇಳೆ ಸುರೇನ್ ಡೈಮರಿ ಪಕ್ಷಕ್ಕೆ ರಾಜೀನಾಮೆ ನೀಡಿದರೂ ಅವರ ಹೆಸರು ಇವಿಎಂನಲ್ಲಿ ಇರಲಿದ್ದು, ಜನರು ನಾಳೆ ಅವರಿಗೆ ಮತ ಚಲಾಯಿಸಬಹುದು ಎಂದು ತಿಳಿಸಿದ್ದಾರೆ.



