ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಚುನಾವಣಾ ಅಖಾಡ ದಿನೇ ದಿನೇ ರಂಗೇರುತ್ತಿದ್ದು, ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮಾತಿನ ಸಮರ ಬಲು ಜೋರಾಗಿಯೇ ನಡೆಯುತ್ತಿದೆ.
ಇಂದು ಸಿಎಂ ಮಮತಾ ಬ್ಯಾನರ್ಜಿ ಅವರು ಮತ್ತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ವಿಷಕಾರಿ ಹಾವನ್ನಾದರೂ ನಂಬಬಹುದು, ಆದರೆ ಬಿಜೆಪಿಯನ್ನು ಎಂದಿಗೂ ನಂಬಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ಉತ್ತರ 24 ಪರಗಣ ಜಿಲ್ಲೆಯ ತೆಂತುಲಿಯಾದಲ್ಲಿ ಚುನಾವಣಾ ಱಲಿಯನ್ನುದ್ದೇಶಿಸಿ ಮಾತನಾಡಿದ ದೀದಿ, ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ 90 ಲಕ್ಷ ಹೆಸರುಗಳನ್ನು ತಗೆದು ಹಾಕಲಾಗಿದೆ. 60 ಲಕ್ಷ ಹಿಂದುಗಳು ಮತ್ತು 30 ಲಕ್ಷ ಮುಸ್ಲಿಮರಿದ್ದಾರೆ. ಇದರಿಂದ ತಿಳಿಯಲಿದೆ ಬಿಜೆಪಿ ಯಾರ ಪರವೂ ಅಲ್ಲ ಎಂದು ಟೀಕಿಸಿದರು.
ಬಿಜೆಪಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಹೊರಗಿನವರನ್ನು, ಹಣ ಮತ್ತು ಮಾದಕ ದ್ರವ್ಯಗಳನ್ನು ತಂದು ಪ್ರಯತ್ನಿಸುತ್ತಿದೆ . ಆದರೆ ಅವರು ಏನೇ ಮಾಡಿದರೂ ನಮ್ಮ ಕಾರ್ಯಕರ್ತರು ಹೋರಾಡಲಿದ್ದಾರೆ. ಬಂಗಾಳದ ಮಕ್ಕಳನ್ನು ಸೋಲಿಸಲು ಸಾಧ್ಯವಿಲ್ಲ ಎಂದು ದೀದಿ ಗುಡುಗಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ದೀದಿ, ಇಂದು ಯಾವುದೇ ತನಿಖಾ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ಉಳಿದಿಲ್ಲ . ಸಿಬಿಐ, ಇಡಿ ಇರಲಿ ಅಥವಾ ಚುನಾವಣಾ ಆಯೋಗವೇ ಇರಲಿ ಎಲ್ಲವನ್ನೂ ಬಿಜೆಪಿ ಖರೀದಿಸಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.



