April 11, 2026
Saturday, April 11, 2026
spot_img

ನುಸುಳುಕೋರರಿಗೆ ಗೇಟ್ ಪಾಸ್ ಪಕ್ಕಾ: ಬಂಗಾಳದಲ್ಲಿ ಗುಡುಗಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ಚುನಾವಣಾ ಕಣ ರಂಗೇರುತ್ತಿದ್ದು, ಇಂದು ಪ್ರಧಾನಿ ಮೋದಿ ಅವರು ಖುದ್ದು ಅಖಾಡಕ್ಕೆ ಇಳಿದ್ದು ಭರ್ಜರಿ ಪ್ರಚಾರ ನಡೆಸಿದರು.

ಬಂಗಾಳದ ಪೂರ್ವ ಬುರ್ದ್ವಾನ್‌ನಲ್ಲಿ ನಡೆದ ಬೃಹತ್ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ, ದೇಶದಿಂದಲೇ ಒಳನುಸುಳುವವರನ್ನು ಹೊರಹಾಕುತ್ತೇವೆ ಎಂದು ಗುಡುಗಿದರು.

ಬಂಗಾಳದಲ್ಲಿರುವ ಪ್ರತಿಯೊಬ್ಬ ನುಸುಳುಕೋರರನ್ನು ಹೊರ ಹಾಕಲು ಬಿಜೆಪಿ ಬದ್ದವಾಗಿದ್ದು, ಜೊತೆಗೆ ಯಾರು ಯಾರು ಅಕ್ರಮವಾಗಿ ನೆಲೆಸಲು ಸಹಾಯ ಮಾಡಿದ್ದರೋ ಅಂತಹವರ ವಿರುದ್ಧವೂ ಕಠಿಣ ಕ್ರಮ ಕೈಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ರಾಜಕೀಯ ಹಿಂಸಾಚಾರದಿಂದಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಬಿಜೆಪಿ ಸರ್ಕಾರ ರಚನೆಯಾದ ಕೂಡಲೇ ಪ್ರತಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಲಾಗುವುದು. ರಾಜಕೀಯ ಹಿಂಸಾಚಾರ ಕೃತ್ಯಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದೇ ವೇಳೆ ದೀದಿ ಸರಕಾರದ ಭ್ರಷ್ಟಾಚಾರದ ವಿರುದ್ಧ ಗುಡುಗಿದ ಮೋದಿ, ಟಿಎಂಸಿಯ ಪ್ರತಿಯೊಬ್ಬ ಭ್ರಷ್ಟ ಶಾಸಕ, ಸಚಿವ ಹಾಗೂ ಅವರ ಬೆಂಬಲಿತ ಗೂಂಡಾಗಳ ವಿರುದ್ಧ ಶ್ವೇತಪತ್ರ ಹೊರಡಿಸಿ, ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ಆಯೋಗವನ್ನು ರಚಿಸಿ, ತಪ್ಪಿತಸ್ಥರಿಗೆ ಕಾನೂನಿನ ಮೂಲಕ ಕಠಿಣ ಶಿಕ್ಷೆ ನೀಡಲಾಗುವದು ಎಂದು ಹೇಳಿದರು.

ಬಂಗಾಳದಲ್ಲಿ ಇಂದು ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ ಬಿಜೆಪಿ ಸರ್ಕಾರವು ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡುವ ಕೈಗಾರಿಕೆಗಳನ್ನು ಸ್ಥಾಪಿಸಲಿದ್ದು, ಈ ಮೂಲಕ ಯುವಜನತೆಗೆ ಶಕ್ತಿ ತುಂಬಲಿದೆ. ಜೊತೆಗೆ ಸರ್ಕಾರಿ ನೇಮಕಾತಿಯಲ್ಲೂ ವಯಸ್ಸಿನ ಮಿತಿಯನ್ನು ದಾಟಿದ ಯುವಕರಿಗೆ ವಿಶೇಷ ವಯಸ್ಸಿನ ಸಡಿಲಿಕೆ ನೀಡುವ ಮೂಲಕ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !