ಹೊಸದಿಗಂತ ಡಿಜಿಟಲ್ ಡೆಸ್ಕ್:
ಆದಿಚುಂಚನಗಿರಿ ಮಠದ ಶ್ರೀಗುರು ಭೈರವೈಕ್ಯ ಮಂದಿರವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಂಡ್ಯ ಜಿಲ್ಲೆಯ ಸಂಸ್ಕೃತಿ ಮತ್ತು ಜನರ ಗುಣವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
“ಮಧುರ ಮಂಡ್ಯ, ಸಕ್ಕರೆ ಮಂಡ್ಯ” ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ, ಮಂಡ್ಯದ ಕಬ್ಬು ಎಷ್ಟು ಸಿಹಿಯೋ, ಇಲ್ಲಿನ ಜನರ ಮಾತು ಮತ್ತು ಮನಸ್ಸು ಕೂಡ ಅಷ್ಟೇ ಮಧುರ ಎಂದು ಬಣ್ಣಿಸಿದರು. ಪ್ರಧಾನಿಯವರ ಈ ಕನ್ನಡದ ನುಡಿಗಳಿಗೆ ನೆರೆದಿದ್ದ ಜನಸ್ತೋಮ ಹರ್ಷೋದ್ಗಾರದ ಮೂಲಕ ಭವ್ಯ ಸ್ವಾಗತ ನೀಡಿತು.
ಮಂಡ್ಯ ಕೇವಲ ಕಬ್ಬಿನ ಸಿಹಿಗೆ ಮಾತ್ರವಲ್ಲ, ಪ್ರೀತಿ ಹಂಚುವ ಜನರ ಮಧುರ ಸ್ವಭಾವಕ್ಕೂ ಹೆಸರುವಾಸಿ. ನಮ್ಮ ಕರ್ನಾಟಕ ರಾಜ್ಯವು ಒಂದೆಡೆ ಆಧುನಿಕ ತಂತ್ರಜ್ಞಾನ ಹಾಗೂ ಇನ್ನೊಂದೆಡೆ ಅಧ್ಯಾತ್ಮದ ತತ್ವಜ್ಞಾನ, ಎರಡರಲ್ಲೂ ಶ್ರೀಮಂತವಾಗಿದೆ ಎಂದು ಮೋದಿ ಹೆಮ್ಮೆಯಿಂದ ನುಡಿದರು.
ಇದೇ ಸಂದರ್ಭದಲ್ಲಿ ಮಂಡ್ಯದ ಖಾದ್ಯ ‘ರಾಗಿ ಮುದ್ದೆ’ಯನ್ನು ನೆನಪಿಸಿಕೊಂಡ ಮೋದಿ, “ನಮ್ಮ ಮುಂದೆ ದೇವೇಗೌಡರಿದ್ದಾರೆ, ಅವರು ರಾಗಿ ಮುದ್ದೆಯನ್ನು ವಿಶ್ವದಾದ್ಯಂತ ಜನಪ್ರಿಯಗೊಳಿಸಿದ್ದಾರೆ,” ಎಂದರು. ಆರೋಗ್ಯದ ದೃಷ್ಟಿಯಿಂದ ಸಿರಿಧಾನ್ಯಗಳ ಮಹತ್ವವನ್ನು ವಿವರಿಸಿದ ಅವರು, ಬೊಜ್ಜು ಮುಕ್ತ ಜೀವನಕ್ಕಾಗಿ ಎಣ್ಣೆ ಪದಾರ್ಥಗಳನ್ನು ಬಿಟ್ಟು ಆಹಾರದಲ್ಲಿ ರಾಗಿಯಂತಹ ಸಿರಿಧಾನ್ಯಗಳನ್ನು ಬಳಸಲು ಕರೆ ನೀಡಿದರು.



