ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರ್ಡ್ ಪುನರ್ ವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಸರ್ಕಾರ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಜೂನ್ 30ರೊಳಗೆ ಚುನಾವಣೆ ಮುಗಿಸುವಂತೆ ಈ ಹಿಂದೆ ಗಡುವು ನೀಡಿತ್ತು. ಸರ್ಕಾರದ ಈ ಅಫಿಡವಿಟ್ ಸಲ್ಲಿಕೆಯಿಂದಾಗಿ, ಈಗ ಚೆಂಡು ಚುನಾವಣಾ ಆಯೋಗದ ಅಂಗಳದಲ್ಲಿದೆ.
2015ರ ನಂತರ ಬೆಂಗಳೂರಿನಲ್ಲಿ ಪಾಲಿಕೆ ಚುನಾವಣೆ ನಡೆಯದೇ ಇರುವುದು ಗಮನಾರ್ಹ. ಈಗ ಸರ್ಕಾರಿ ಪ್ರಕ್ರಿಯೆಗಳು ಮುಗಿದಿರುವುದರಿಂದ ಜೂನ್ ಅಂತ್ಯದೊಳಗೆ ಐದು ನಗರ ಪಾಲಿಕೆಗಳಿಗೆ ಮತದಾನ ನಡೆಯುವ ಸಾಧ್ಯತೆ ದಟ್ಟವಾಗಿದೆ.



