ಹೊಸದಿಗಂತ ವರದಿ, ಕಲಬುರಗಿ:
ವಿದ್ಯಾರ್ಥಿಗಳು ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾತ್ರ ವಹಿಸುವ ಮೂಲಕ, ವಿಕಸಿತ ಭಾರತದ ಕನಸಿನಡಿ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಸಾಧಿಸಲು ನವೀನತೆ ಮತ್ತು ನಾಯಕತ್ವದೊಂದಿಗೆ ಮುಂದೆ ಬರಬೇಕೆಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹೇಳಿದರು.
ಕಲಬುರಗಿಯ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಅವರು,ಆತ್ಮನಿರ್ಭರ ಭಾರತ ಪರಿಕಲ್ಪನೆಯ ಮಹತ್ವವನ್ನೂ ಒತ್ತಿ ಹೇಳಿದರು. ಸ್ವಾವಲಂಬನೆ, ಸ್ಥಳೀಯ ಉದ್ಯಮಗಳಿಗೆ ಬೆಂಬಲ ಮತ್ತು ಜಾಗತಿಕ ಸ್ಪರ್ಧಾತ್ಮಕತೆಗಾಗಿ ಯುವಕರು ತಮ್ಮ ಕೌಶಲ್ಯಗಳನ್ನು ಬಳಸಿಕೊಳ್ಳಬೇಕೆಂದರು.
ಮಹಿಳೆಯರ ಸಾಧನೆ ವಿಶೇಷವಾಗಿ ಗಮನ ಸೆಳೆದಿದ್ದು, ಚಿನ್ನದ ಪದಕ ವಿಜೇತರಲ್ಲಿ 80%ಕ್ಕೂ ಹೆಚ್ಚು ಮಹಿಳೆಯರಿರುವುದು ನಾರಿ ಶಕ್ತಿಯ ಬೆಳವಣಿಗೆಯ ಸಂಕೇತವಾಗಿದೆ.
ಹವಾಮಾನ ಬದಲಾವಣೆ, ತಾಂತ್ರಿಕ ಪರಿವರ್ತನೆ ಮತ್ತು ಸಾಮಾಜಿಕ ಅಸಮಾನತೆಗಳಂತಹ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಪದವೀಧರರಿಗೆ ಸಲಹೆ ನೀಡಿ,ಪೋಷಕರು ಮತ್ತು ಗುರುಗಳ ಕೊಡುಗೆಗಳನ್ನು ಸ್ಮರಿಸಿ, ಮೌಲ್ಯಾಧಾರಿತ ಜೀವನ ನಡೆಸುವಂತೆ ಕರೆ ನೀಡಿದರು.
ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್,ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ರಿಜಿಸ್ಟ್ರಾರ್ ಪ್ರೊ. ಆರ್.ಆರ್. ಬಿರಾದಾರ್ ಹಾಗೂ ಪರೀಕ್ಷಾ ನಿಯಂತ್ರಕ ಪ್ರೊ.ಭರತ್ ಕುಮಾರ್ ಸೇರಿದಂತೆ ಗಣ್ಯರು ಭಾಗವಹಿಸಿದರು.



