ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ಸಿಬಿ ವಿರುದ್ಧದ ಹೀನಾಯ ಸೋಲಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಶಿಬಿರದಲ್ಲಿ ಆತಂಕ ಹೆಚ್ಚಾದರೂ, ನಾಯಕ ಅಕ್ಷರ್ ಪಟೇಲ್ ತಂಡದ ಪರವಾಗಿ ಧೈರ್ಯದ ಮಾತುಗಳನ್ನಾಡಿದ್ದಾರೆ. ಪವರ್ಪ್ಲೇಯಲ್ಲೇ ಕಡಿಮೆ ಮೊತ್ತಕ್ಕೆ ಆರು ವಿಕೆಟ್ ಕಳೆದುಕೊಂಡಿದ್ದು ದೊಡ್ಡ ಹೊಡೆತವಾದರೂ, ಇದರಿಂದ ತಂಡದ ಆತ್ಮವಿಶ್ವಾಸ ಕುಗ್ಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಪಂದ್ಯದ ನಂತರ ಮಾತನಾಡಿದ ಅಕ್ಷರ್, ಸತತ ಸೋಲುಗಳಿಂದ ಆಟಗಾರರ ಮೇಲೆ ಮಾನಸಿಕ ಒತ್ತಡ ಹೆಚ್ಚಾಗಿದೆ ಎಂದು ಒಪ್ಪಿಕೊಂಡರು. ವಿಶೇಷವಾಗಿ ಪಂಜಾಬ್ ವಿರುದ್ಧ 264 ರನ್ ಕಲೆಹಾಕಿದರೂ ಗೆಲುವು ಸಿಗದ ನೋವು ಇನ್ನೂ ತಂಡವನ್ನು ಕಾಡುತ್ತಿದೆ ಎಂದು ಹೇಳಿದರು. ಅದೇ ಪರಿಣಾಮ ಬ್ಯಾಟಿಂಗ್ನಲ್ಲಿ ಕಂಡುಬಂದಿದೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.
ಇದನ್ನೂ ಓದಿ:
ಆದರೆ ಸೋಲಿಗೆ ಯಾರೊಬ್ಬರನ್ನೂ ಹೊಣೆಗಾರರನ್ನಾಗಿ ಮಾಡದೇ, ಇಡೀ ತಂಡ ಒಟ್ಟಾಗಿ ಹೋರಾಡಬೇಕಿದೆ ಎಂದು ಅಕ್ಷರ್ ಸ್ಪಷ್ಟಪಡಿಸಿದರು. ಹೆಚ್ಚು ಬದಲಾವಣೆ ಮಾಡಿದರೆ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗಬಹುದು ಎಂದ ಅವರು, ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಿಲ್ಲದೆ ಮುಂದಿನ ಪಂದ್ಯಗಳಿಗೆ ಸಜ್ಜಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.



