ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯ ನಿರ್ವಾಹಕ ನಿರ್ದೇಶಕ ಹಾಗೂ ವನ್ಯಜೀವಿ ರಕ್ಷಣೆ, ಸಂರಕ್ಷಣೆ ಎಂಬ ಅತ್ಯುತ್ತಮ ಉದ್ದೇಶ ಇರಿಸಿಕೊಂಡು ವಂತಾರ ಆರಂಭಿಸಿದ ಅನಂತ್ ಅಂಬಾನಿ ಅವರು ಅಧಿಕೃತವಾಗಿ ಕೊಲಂಬಿಯಾ ಸರ್ಕಾರಕ್ಕೆ ಒಂದು ಮನವಿ ನೀಡಿದ್ದಾರೆ. ಅಲ್ಲಿ ಸಂಕಷ್ಟದಲ್ಲಿ ಇರುವ 80 ನೀರಾನೆಗಳನ್ನು ಸುರಕ್ಷಿತವಾಗಿ ಹಿಡಿದು, ಅವುಗಳನ್ನು ಜೋಪಾನವಾಗಿ ಸ್ಥಳಾಂತರಿಸಿ, ಅವುಗಳ ಆಜೀವ ಪರ್ಯಂತ ಕಾಳಜಿ ಮಾಡುವುದಾಗಿ ಹೇಳಿದ್ದಾರೆ.
ಅಂದಹಾಗೆ ಕೊಲಂಬಿಯಾದ ಮಗ್ದಲಿನಾ ನದಿ ಪಾತ್ರದಲ್ಲಿ 80 ನೀರಾನೆಗಳನ್ನು ಅಧಿಕೃತವಾಗಿಯೇ ತೆಗೆದುಹಾಕಲು ತಿಳಿಸಲಾಗಿದೆ. ಈ ವಿಚಾರ ಗೊತ್ತಾದ ನಂತರ ಅನಂತ್ ಅಂಬಾನಿ ಅವರು ಕೊಲಂಬಿಯಾ ಸರ್ಕಾರವನ್ನು ಮನವಿ ಮಾಡಿದ್ದಾರೆ. ಈ ನಿರ್ಧಾರ ತಡೆ ಹಿಡಿದು, ಮಾನವೀಯ ನೆಲೆಯಲ್ಲಿ ಪರ್ಯಾಯವನ್ನು ಆಲೋಚಿಸಿ ಎಂದು ಕೇಳಿಕೊಂಡಿದ್ದಾರೆ.
ಸುರಕ್ಷಿತ, ವೈಜ್ಞಾನಿಕ ರೀತಿಯಲ್ಲಿ ಸ್ಥಳಾಂತರ ಮಾಡಿ, ಆ ಎಂಬತ್ತು ಪ್ರಾಣಿಗಳಿಗೆ ಗುಜರಾತ್ ನಲ್ಲಿ ಇರುವ ಜಾಮ್ ನಗರದ ವಂತಾರದಲ್ಲಿ ಶಾಶ್ವತ ನೆಲೆ ಕಲ್ಪಿಸುವ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. ಈ ಬಗ್ಗೆ ಕೊಲಂಬಿಯಾದ ಪರಿಸರ ಹಾಗೂ ಸುಸ್ಥಿರ ಅಭಿವೃದ್ಧಿ ಸಚಿವ ವೆಲೆಜ್ ಟೊರೆಸ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಪ್ರತಿ ಹಂತದಲ್ಲೂ ಕೊಲಂಬಿಯಾದ ಅಧಿಕಾರಿಗಳಿಂದ ಅನುಮತಿ ದೊರಕಿಸಿಕೊಡಬೇಕು ಅಂತಲೂ ಮನವಿ ಮಾಡಿದ್ದಾರೆ. ಅನಂತ್ ಅಂಬಾನಿ ಅವರ ಇಂಥ ನಡೆಗಳಿಂದಲೇ ತುಂಬ ಸಣ್ಣ ಪ್ರಾಯದಲ್ಲೇ ಜಾಗತಿಕ ಮಾನವೀಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಈ ಎಂಬತ್ತು ನೀರಾನೆಗಳು ಎಲ್ಲಿ ಹುಟ್ಟಬೇಕು ಎಂದೇನೂ ಆಯ್ಕೆ ಮಾಡಿಕೊಂಡಿರಲಿಲ್ಲ. ಇವತ್ತಿಗೆ ಸೃಷ್ಟಿ ಆಗಿ ಎದುರಿಸುತ್ತಿರುವ ಸಮಸ್ಯೆಗಳಿಗೂ ಅವುಗಳು ಕಾರಣ ಅಲ್ಲ ಎಂದು ಅನಂತ್ ಹೇಳಿದ್ದಾರೆ.ಅವು ಜೀವಂತವಾಗಿವೆ, ಅವು ಚೇತನ ಜೀವಿಗಳು, ಹಾಗೂ ಸುರಕ್ಷಿತ ಮತ್ತು ಮಾನವೀಯ ಪರಿಹಾರದ ಮೂಲಕ ಅವುಗಳನ್ನು ಉಳಿಸುವ ಸಾಮರ್ಥ್ಯ ನಮಗಿದ್ದರೆ, ನಾವು ಪ್ರಯತ್ನಿಸುವ ಜವಾಬ್ದಾರಿಯನ್ನು ಹೊಂದಿದ್ದೇವೆ ಎಂದಿದ್ದಾರೆ.

ಸಹಾನುಭೂತಿ ಹಾಗೂ ಸಾರ್ವಜನಿಕ ಸುರಕ್ಷತೆ ವಿರೋಧಿ ಶಕ್ತಿಗಳಲ್ಲ . ಸಬಲ ವಿಜ್ಞಾನ ಮತ್ತು ಕಾಳಜಿಯುಕ್ತ ಯೋಜನೆಯಿಂದ, ಈ ಪ್ರಾಣಿಗಳನ್ನು ಸಂರಕ್ಷಿಸಲು ಸಾಧ್ಯವಾಗಬಹುದು. ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಬಹುದು ಹಾಗೂ ಪ್ರಾಣಿಗಳ ಜೀವ ಉಳಿಸಬಹುದು. ವಂತಾರದಲ್ಲಿ ಇದಕ್ಕೆ ಬೇಕಾದ ಪರಿಣತಿ, ಮೂಲಸೌಕರ್ಯ ಹಾಗೂ ಶ್ರಮಕ್ಕೆ ಬೆಂಬಲ ನೀಡಿದಲ್ಲಿ ಕೊಲಂಬಿಯಾದ ನಿಯಮಾವಳಿಯಂತೆಯೇ ಎಲ್ಲವೂ ಸಾಗಲಿದೆ ಎಂದಿದ್ದಾರೆ.
ಹಿನ್ನೆಲೆ:
ಕೊಲಂಬಿಯಾದ ಮಗ್ದಲಿನಾ ನದಿ ಪಾತ್ರದಲ್ಲಿ ಅಂದಾಜು ಇನ್ನೂರು ನೀರಾನೆಗಳಿವೆ. ಇಷ್ಟು ಸಂಖ್ಯೆ ಆಗಿದ್ದು ಕೂಡ ಸಣ್ಣ ಗುಂಪಿನ ಮೂಲಕವಾಗಿ, ಅದು 1980ನೇ ಇಸವಿಯಲ್ಲಿ. ಅಲ್ಲಿ ನೈಜವಾದ ಬಲಿಪ್ರಾಣಿಗಳು ಇಲ್ಲದೆ ಹಾಗೂ ಅತ್ಯುತ್ತಮ ಪರಿಸರದಲ್ಲಿ ಬಹಳ ವೇಗವಾಗಿ ಅವುಗಳ ಸಂತತಿ ಹೆಚ್ಚಾಗಿ ಬೆಳೆಯಿತು. ಇದರಿಂದಾಗಿ ಜೀವವೈವಿಧ್ಯತೆ ನಷ್ಟ, ಪರಿಸರ ವ್ಯವಸ್ಥೆಯ ಹಾನಿ ಮತ್ತು ಸಮುದಾಯ ಸುರಕ್ಷತೆಯ ಆಧಾರದ ಮೇಲೆ ಕೊಲಂಬಿಯಾದ ಅಧಿಕಾರಿಗಳು ಈ ಪ್ರಭೇದಗಳನ್ನು ಆಕ್ರಮಣಕಾರಿ ಎಂದು ವರ್ಗೀಕರಿಸಲು ಕಾರಣವಾಯಿತು. ಅಧಿಕಾರಿಗಳು ಇತ್ತೀಚೆಗೆ 80 ಪ್ರಾಣಿಗಳನ್ನು ಮಾರಕ ಕ್ರಮದ ಮೂಲಕ ನಿಯಂತ್ರಣಕ್ಕಾಗಿ ಅಧಿಕೃತ ನಿರ್ಧಾರ ಮಾಡಿದ್ದಾರೆ. ಈ ನಿರ್ಧಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನವನ್ನು ಸೆಳೆದಿದೆ ಮತ್ತು ಮಾನವೀಯ, ವಿಜ್ಞಾನ ಹಿನ್ನೆಲೆಯಲ್ಲಿ ಪರ್ಯಾಯ ಆಲೋಚನೆಗಳಿಗಾಗಿ ಪ್ರಯತ್ನ ಆರಂಭವಾಗಿದೆ.



