ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ರಾಜಕೀಯದಲ್ಲಿ ಟಿವಿಕೆ ಪಕ್ಷದ ಸಾಧನೆ ಚರ್ಚೆಗೆ ಗ್ರಾಸವಾಗಿರುವ ನಡುವೆ, ನಟ ವಿಜಯ್ ಅವರ ತಂದೆ ಎಸ್.ಎ ಚಂದ್ರಶೇಖರ್ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಮಗನ ಆತ್ಮವಿಶ್ವಾಸ ಮತ್ತು ಜನರ ಮೇಲಿನ ನಂಬಿಕೆಯೇ ಈ ಯಶಸ್ಸಿನ ಹಿಂದೆ ಇರುವ ದೊಡ್ಡ ಶಕ್ತಿ ಎಂದು ಅವರು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಕೆಲವು ವರ್ಷಗಳಿಂದ ವಿಜಯ್ ರಾಜಕೀಯದತ್ತ ಗಂಭೀರ ಹೆಜ್ಜೆ ಇಟ್ಟಿದ್ದು, ಸಮಾಜಕ್ಕಾಗಿ ಕೆಲಸ ಮಾಡುವ ಸಂಕಲ್ಪ ಹೊಂದಿದ್ದರು ಎಂದು ತಿಳಿಸಿದರು. ಯಾವುದೇ ರಾಜಕೀಯ ಮೈತ್ರಿಯಿಲ್ಲದೆ ಸ್ವತಂತ್ರವಾಗಿ ಮುನ್ನಡೆಯುವ ವಿಶ್ವಾಸವನ್ನು ವಿಜಯ್ ಮೊದಲಿನಿಂದಲೇ ಹೊಂದಿದ್ದರು ಎಂದರು.
ಇದನ್ನೂ ಓದಿ:
ತಮಿಳುನಾಡಿನ ಜನರು ವಿಜಯ್ ಅವರನ್ನು ಕೇವಲ ನಟನಾಗಿ ಮಾತ್ರವಲ್ಲ, ಮನೆಯವರಂತೆ ಕಾಣುತ್ತಾರೆ. ಯುವಕರಿಗೆ ಅವರು ಸ್ಫೂರ್ತಿ, ಮಹಿಳೆಯರಿಗೆ ಮಗನಂತೆ, ಹಿರಿಯರಿಗೆ ಕುಟುಂಬದ ಸದಸ್ಯನಂತೆ ಆತ್ಮೀಯರಾಗಿದ್ದಾರೆ ಎಂದು ಚಂದ್ರಶೇಖರ್ ಹೇಳಿದರು. ಈ ಜನಾಭಿಮಾನವೇ ವಿಜಯ್ ಅವರ ರಾಜಕೀಯ ಪಯಣಕ್ಕೆ ದೊಡ್ಡ ಬಲವಾಗಿದ್ದು, ಮುಂದಿನ ದಿನಗಳಲ್ಲಿ ತಮಿಳುನಾಡಿನ ರಾಜಕೀಯದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.



