ಹೈದರಾಬಾದ್ನಲ್ಲಿ ಸರ್ಕಾರಿ ಶಾಲೆಯೊಂದನ್ನು ಕಟ್ಟೋದಕ್ಕಾಗಿ 800 ವರ್ಷ ಹಳೆಯ ಕಾಲದ ಶಿವ ದೇವಾಲಯವನ್ನು ನೆಲಸಮ ಮಾಡಲಾಗಿದ್ದು, ಕೇಸ್ ದಾಖಲಾಗಿದೆ.
ತೆಲಂಗಾಣದ ವಾರಂಗಲ್ನ ಖಾನಾಪುರ ಮಂಡಲದ ಅಶೋಕ್ ನಗರದಲ್ಲಿರುವ 13ನೇ ಶತಮಾನದ ಕಾಕತೀಯ ದೊರೆ ಗಣಪತಿದೇವನ ಕಾಲದ ದೇಗುಲ ಇದಾಗಿದೆ.
ಈ ದೇವಾಲಯದಲ್ಲಿ ತೆಲುಗು ಭಾಷೆಯಲ್ಲಿ ಬರೆದ ಸಾಲಲುಗಳಿತ್ತು. ಇಷ್ಟೆಲ್ಲಾ ಇತಿಹಾಸ ಇರುವ ದೇವಾಲಯವನ್ನು ನೆಲಸಮ ಮಾಡಿರುವುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಮಣ್ಣಿನ ಕೋಟೆ ಪ್ರದೇಶದ ಒಳಗಿದ್ದ ದೇಗುಲಕ್ಕೆ ಮತ್ತೆ ಜೀವ ಕೊಡಬಹುದಿತ್ತು. ರಕ್ಷಣೆ ಮಾಡಲು ಕಷ್ಟವಾಗಿದ್ದಲ್ಲಿ ಸ್ಥಳಾಂತರ ಮಾಡಬಹುದಿತ್ತು. ಆದರೆ ನೆಲಸಮ ಮಾಡಿದ್ದು ತಪ್ಪು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಈಗಾಗಲೇ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರಕ್ಕೆ ದೂರು ದಾಖಲಿಸಲಾಗಿದೆ. ರಾಜ್ಯ ಸರ್ಕಾರ ಕಡ್ಡಾಯ ಪರಂಪರೆ ಸಂರಕ್ಷಣಾ ಸಮಿತಿಯನ್ನು ರಚಿಸುವಲ್ಲಿ ವಿಫಲವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಆದರೆ ಜಿಲ್ಲಾಡಳಿತ ಈ ಎಲ್ಲ ಆರೋಪವನ್ನು ತಿರಸ್ಕರಿಸಿದೆ. ಉದ್ದೇಶಪೂರ್ವಕವಾಗಿ ಧ್ವಂಸ ಮಾಡಿಲ್ಲ. ಇಲ್ಲಿ ದಟ್ಟ ಪೊದೆಗಳನ್ನು ತೆರವು ಮಾಡುವಾಗ ಆಕಸ್ಮಿಕವಾಗಿ ಈ ರೀತಿ ಆಗಿದೆ. ಇಲ್ಲಿ ದೇವಸ್ಥಾನ ಇರಲಿಲ್ಲ ಬರೀ ಶಿಥಿಲಗೊಂಡ ಅವಶೇಷಗಳು ಮಾತ್ರ ಇವೆ ಎಂದು ಹೇಳಿದೆ.



