ಹೊಸ ದಿಗಂತ ಡಿಜಿಟಲ್ ಡೆಸ್ಕ್
ಪಂಚ ರಾಜ್ಯ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಬಂಗಾಳ, ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಪದಗ್ರಹಣ ನಡೆದಿದ್ದು, ಅಸ್ಸಾಂನಲ್ಲೂ ಸಿಎಂ ಆಯ್ಕೆ ನಡೆದು ಸಮಾರಂಭಕ್ಕೆ ವೇದಿಕೆ ಸಜ್ಜಾಗಿದೆ. ಆದರೆ ಕೇರಳದಲ್ಲಿ ಬಹುಮತ ಪಡೆದು ಅಧಿಕಾರದ ಗದ್ದುಗೆಗೆ ಏರಿದ ಯುಡಿಎಫ್ ಗೆ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಗದಂತಾಗಿದೆ.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಲ್ಲಿ ಮುಖ್ಯಮಂತ್ರಿ ಆಯ್ಕೆ ಕಸರತ್ತು ನಡೆಯುತ್ತಲ್ಲೇ ಇದ್ದು, ಒಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೆ.ಸಿ. ವೇಣುಗೋಪಾಲ್ ಪರ ಒಲವು ತೋರಿದ್ದರೆ ಮತ್ತೊಂದೆಡೆ ವಿ.ಡಿ. ಸತೀಶನ್ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಈ ಕುರಿತು ಸಭೆ ಮೇಲೆ ಸಭೆ ನಡೆಯುತ್ತಿದೆ. ಇದರ ನಡುವೆ ವೇಣುಗೋಪಾಲ್ ವಿರುದ್ಧ ಕೇರಳದ ಹಲವು ಭಾಗಗಳಲ್ಲಿ ಪೋಸ್ಟರ್ಗಳು ಹರಿದಾಡುತ್ತಿದ್ದು, ಇದು ಪಕ್ಷದೊಳಗಿನ ಭಿನ್ನಮತವನ್ನು ಎಲ್ಲರ ಮುಂದೆ ತೆರೆದಿಟ್ಟಿದೆ.
ಈ ಸಂಬಂಧ ರಾಹುಲ್ ಗಾಂಧಿ ಅವರು ವಿ.ಡಿ. ಸತೀಶನ್ರನ್ನು ಪ್ರಶ್ನಿಸಿದಾಗ ಕೂಡ ವೇಣುಗೋಪಾಲ್ ಸಿಎಂ ಆಗುವುದನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಇದರ ಮದ್ಯೆ ಕೇರಳ ಕಾಂಗ್ರೆಸ್ನ ಪ್ರಬಲ ನಾಯಕರಾದ ವಿ.ಡಿ. ಸತೀಶನ್ ಪರ ಮುಸ್ಲಿಂ ಲೀಗ್ ಪಕ್ಷವು ಒಲವು ತೋರಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಅಭಯ ಯಾರ ಮೇಲಿದೆ ಎಂದು ಕಾದುನೋಡಬೇಕಿದೆ.



