ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ದ್ರಾವಿಡ ರಾಜಕಾರಣದಲ್ಲಿ ಭಾರಿ ಹೈಡ್ರಾಮಾ ಶುರುವಾಗಿದೆ. ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಅಧಿಕಾರದ ಗದ್ದುಗೆ ಏರಲು ಸಜ್ಜಾಗುತ್ತಿದ್ದಂತೆ, ಅತ್ತ ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ ಇತಿಹಾಸದಲ್ಲೇ ಕಾಣದಂತಹ ದೊಡ್ಡ ಸೀಳುವಿಕೆಗೆ ಸಾಕ್ಷಿಯಾಗುತ್ತಿದೆ.
ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದಿರುವ ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಲು ಎಡಪ್ಪಾಡಿ ಪಳನಿಸ್ವಾಮಿ ನಿರಾಕರಿಸಿದ್ದಾರೆ. ಆದರೆ, ಪಕ್ಷದ ಈ ನಿಲುವಿಗೆ 47 ಶಾಸಕರ ಪೈಕಿ ಬರೋಬ್ಬರಿ 36 ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವರಾದ ಸಿ.ವಿ. ಷಣ್ಮುಗಂ ಮತ್ತು ಎಸ್.ಪಿ. ವೇಲುಮಣಿ ನೇತೃತ್ವದಲ್ಲಿ ಈ ಶಾಸಕರು ರಹಸ್ಯ ಸಭೆ ನಡೆಸಿರುವುದು ಈಗ ಇಪಿಎಸ್ ಬಣಕ್ಕೆ ನಡುಕ ಹುಟ್ಟಿಸಿದೆ.
ಬಂಡಾಯ ಎದ್ದಿರುವ ಶಾಸಕರ ಪ್ರಕಾರ, ಬಿಜೆಪಿಯೊಂದಿಗಿನ ಮೈತ್ರಿಯೇ ಪಕ್ಷದ ಹೀನಾಯ ಸೋಲಿಗೆ ಮುಖ್ಯ ಕಾರಣ. ಹೀಗಾಗಿ, ಎನ್ಡಿಎ ಮೈತ್ರಿಯಿಂದ ಹೊರಬಂದು ವಿಜಯ್ ಅವರ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡುವ ಮೂಲಕ ಪಕ್ಷವನ್ನು ಉಳಿಸಿಕೊಳ್ಳಬೇಕು ಎಂಬುದು ಬಂಡಾಯಗಾರರ ವಾದವಾಗಿದೆ. ಒಂದು ವೇಳೆ ಈ 36 ಶಾಸಕರು ವಿಶ್ವಾಸಮತ ಯಾಚನೆಯ ವೇಳೆ ವಿಜಯ್ ಪರವಾಗಿ ಮತ ಚಲಾಯಿಸಿದರೆ, ಎಐಎಡಿಎಂಕೆ ಅಧಿಕೃತವಾಗಿ ಇಪ್ಪತ್ತಾಗುವುದು ಖಚಿತ ಎನ್ನಲಾಗುತ್ತಿದೆ.



