ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಮೊದಲ ಸಚಿವ ಸಂಪುಟ ಸಭೆ ನಡೆಸಿದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಗಡಿ ಭದ್ರತೆಗೆ ಸಂಬಂಧಿಸಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಭಾರತ–ಬಾಂಗ್ಲಾದೇಶ ಗಡಿ ಪ್ರದೇಶದಲ್ಲಿ ಫೆನ್ಸಿಂಗ್ ಕಾರ್ಯಕ್ಕೆ ಗಡಿ ಭದ್ರತಾ ಪಡೆ (ಬಿಎಸ್ಎಫ್)ಗೆ ಭೂಮಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಬಾಂಗ್ಲಾ ಗಡಿಭಾಗದಲ್ಲಿ ಫೆನ್ಸಿಂಗ್ ಹಾಕುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಾಗಿದ್ದು, ಮುಂದಿನ 45 ದಿನಗಳ ಒಳಗೆ ಗಡಿ ಭದ್ರತಾ ಪಡೆಗೆ ಭೂಮಿ ಹಸ್ತಾಂತರಿಸಲು ನೂತನ ಸರ್ಕಾರ ತೀರ್ಮಾನಿಸಿದೆ.
ಬಂಗಾಳ ಚುನಾವಣಾ ಪ್ರಚಾರದ ವೇಳೆ ಬಿಜೆಪಿಯು ಗಡಿ ಬೇಲಿ ನಿರ್ಮಾಣದ ಕುರಿತು ಭರವಸೆ ನೀಡಿತ್ತು. ಇದೀಗ ಅಧಿಕಾರಕ್ಕೆ ಬಂದ ಕೂಡಲೇ ಅಕ್ರಮ ನುಸುಳುವಿಕೆ ಮತ್ತು ಕಳ್ಳಸಾಗಣೆಯನ್ನು ತಡೆಯುವ ಉದ್ದೇಶದಿಂದ ಮಹತ್ವದ ಕ್ರಮ ಕೈಗೊಂಡಿದೆ.
ಇದೇ ವೇಳೆ ಬಂಗಾಳ ಚುನಾವಣೆಯನ್ನು ಹಿಂಸಾಮುಕ್ತವಾಗಿ ನಡೆಸಲು ನೆರವಾದ ಚುನಾವಣಾ ಆಯೋಗ, ಪೊಲೀಸ್, ಸಿಎಪಿಎಫ್ ಹಾಗೂ ಸಾರ್ವಜನಿಕರಿಗೆ ಸಿಎಂ ಅಧಿಕಾರಿ ಧನ್ಯವಾದ ಅರ್ಪಿಸಿದ್ದಾರೆ.
ಜೊತೆಗೆ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ, ಪಿಎಂ ಕಿಸಾನ್ ಸಮ್ಮಾನ್ ನಿಧಿ, ಕೈಗಾರಿಕಾ ಅಭಿವೃದ್ಧಿ, ಉದ್ಯೋಗ ನೇಮಕಾತಿ ಮತ್ತು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳನ್ನು ಜಾರಿಗೆ ತರಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.



