May 16, 2026
Saturday, May 16, 2026
spot_img

ದೇಶದಲ್ಲಿ ಇಂತಹ ಪರಿಸ್ಥಿತಿ ಆಗೋದಕ್ಕೆ ಕಾರಣ ಯಾರು?: ಪ್ರಧಾನಿ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅದು ಮಾಡಿ ಇದು ಮಾಡಿ ಅನ್ನೋದೇ ಹೇಳೋದಾಯ್ತು, ಇವರೇನು ಮಾಡಿದ್ದಾರೆ ಅದನ್ನು ಮೊದಲು ಹೇಳಲಿ ಎಂದು ಪ್ರಧಾನಿ ಮೋದಿ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೋದಿ ಅವರು ಚಪ್ಪಾಳೆ ಹೊಡೀರಿ ಅಂದ್ರೆ ಹೊಡೀತೇವೆ. ಪೆಟ್ರೋಲ್, ಡೀಸೆಲ್ ಜಾಸ್ತಿ ಬಳಸಬೇಡಿ ಅಂದ್ರೆ ನಾವು ಪಾಲಿಸುತ್ತೇವೆ. ಬಂಗಾರ ಖರೀದಿಸಬೇಡಿ ಎಂದರೆ ಬಿಡುತ್ತೇವೆ. ದೇಶಕ್ಕಾಗಿ ಇತಿ ಮಿತಿಯನ್ನು ಪಾಲಿಸೋಣ. ಆದರೆ ಇಂತಹ ಪರಿಸ್ಥಿತಿ ಆಗೋದಕ್ಕೆ ಕಾರಣ ಯಾರು? ಅದು ಮಾಡಿ ಇದು ಮಾಡಿ ಅನ್ನೋದೇ ಆಯ್ತು. ಆದರೆ ಇವರೇನು ಮಾಡ್ತಿದಾರೆ? ಮುಂಜಾಗ್ರತಾ ಕ್ರಮವಾಗಿ ಏನು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎನ್ನೋದು ಬೇಕಲ್ವಾ ಎಂದು ಪ್ರಶ್ನಿಸಿದರು.

ಈಗ ಮೋದಿ ಬಂಗಾರ ಖರೀದಿ ಮಾಡಬೇಡಿ ಎನ್ನುತ್ತಿದ್ದಾರೆ. ಏನೇನೋ ಹೇಳುತ್ತಾ ಬಂದಿದ್ದಾರೆ. ಆದರೆ ಅಮೆರಿಕ ಯಾವ ರೀತಿ ನಮ್ಮ ಪ್ರಧಾನ ಮಂತ್ರಿಯನ್ನು ಕಂಟ್ರೋಲ್ ಮಾಡುತ್ತಿದೆ ಅಂತ ಮಾಧ್ಯಮದಲ್ಲೇ ನೋಡುತ್ತಿದ್ದೇವೆ. ಭಾರತದ ಬಗ್ಗೆ ಟ್ರಂಪ್ ಏನು ಹೇಳುತ್ತಿದ್ದಾರೆ ಗೊತ್ತಲ್ಲ ಎಂದು ವ್ಯಂಗ್ಯವಾಡಿದರು.

ಚುನಾವಣೆ ಮುಗಿದ ಕೂಡಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ಇದು ಕಂಪ್ಲೀಟ್ ರಾಜಕಾರಣ. ಈಗೇನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿಲ್ಲ. ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಕಚ್ಚಾ ತೈಲ ಬೆಲೆ ಎಷ್ಟು ಏರಿತ್ತು ಗೊತ್ತಿದೆ. ಆದ್ರೂ ಜನರಿಗೆ ಬರೆ ಹಾಕುವ ಕೆಲಸ ಮಾಡಿಲ್ಲ. ಈಗ ದಿಢೀರ್ ಆಗಿ ೩ ರೂಪಾಯಿ ಬೆಲೆ ಏರಿಸಿ ಜನರ ಮೇಲೆ ಹೊರೆ ಹಾಕಿದ್ದಾರೆ ಎಂದು ಹೇಳಿದರು.

ಹಿಜಾಬ್ ವಿವಾದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಶಿಕ್ಷಣದಲ್ಲಿ ರಾಜಕಾರಣ ಯಾವತ್ತೂ ಮಾಡಬಾರದು. ಮಕ್ಕಳು ಮುಗ್ಧರಿದ್ದಾರೆ, ಪಾಲಕರು ಕಲಿಯುವುದಕ್ಕೆಂದು ಶಾಲೆಗೆ ಕಳಿಸುತ್ತಾರೆ. ಈ ವಿಚಾರದಲ್ಲಿ ಹೆಚ್ಚು ಚರ್ಚೆ ಮಾಡದೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ವಾತಾವರಣ ಸೃಷ್ಟಿ ಮಾಡಬೇಕೆಂದು ಮಾತ್ರ ಹೇಳುತ್ತೇನೆ. ಅವರ ಭವಿಷ್ಯದ ಜೊತೆ ಚೆಲ್ಲಾಟ ಆಡಬಾರದು. ಹಿಜಾಬ್ ಅಥವಾ ಇನ್ನಾವುದೇ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಮಕ್ಕಳ ಭವಿಷ್ಯ ತಲೆಯಲ್ಲಿಟ್ಡು ರಾಜಕಾರಣ ಮಾಡಬೇಕು ಅಂತ ಹೇಳುತ್ತೇನೆ ಎಂದು ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟದ ವಿಸ್ತರಣೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಎಲ್ಲವೂ ಪಕ್ಷದ ಹೈಕಮಾಂಡ್ ತೀರ್ಮಾನ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳು. ನಾವೇನೂ ಪ್ರತಿಕ್ರಿಯೆ ನೀಡಲ್ಲ ಎಂದರು.

ಬಾಗಲಕೋಟೆಯಲ್ಲಿ ಅಂಗನವಾಡಿಯಿಂದ ಹಣ ಕಲೆಕ್ಷನ್ ಮಾಡಲಾಗಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಯಾವುದೇ ಅಂಗನವಾಡಿಯಿಂದ ಹಣ ತಗೊಂಡಿದ್ದಿಲ್ಲ. ಯಾರೇ ಆಗಲಿ ಹಾಗೇನಾದರೂ ಹಣ ಕಲೆಕ್ಷನ್ ಮಾಡಿದ್ದಲ್ಲಿ ಅವರ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸ್ತೀನಿ. ತನಿಖೆಯನ್ನು ಕೈಗೊಳ್ತೀನಿ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !