ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಕಾವೇರಿ ನೀರನ್ನು ಪೂರೈಸಲು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಅಗರ ಮತ್ತು ಮದ್ದೂರು ಕೆರೆಗಳ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಬುಧವಾರ ತಿಳಿಸಿದ್ದಾರೆ.
ಈ ಯೋಜನೆಯಿಂದ ಕೇವಲ ಕೈಗಾರಿಕೆಗಳಷ್ಟೇ ಅಲ್ಲದೆ, ಪ್ರಸ್ತುತ ವರ್ಷಕ್ಕೆ ಒಂದು ಬೆಳೆ ಬೆಳೆಯುತ್ತಿರುವ ಸ್ಥಳೀಯ ರೈತರು ವರ್ಷಕ್ಕೆ ಎರಡು ಬೆಳೆಗಳನ್ನು ಬೆಳೆಯಲು ನೀರಾವರಿ ಸೌಲಭ್ಯ ಸಿಗಲಿದ್ದು, ಇದು ಅವರಿಗೆ ವರದಾನವಾಗಲಿದೆ ಎಂದು ಹೇಳಿದ್ದಾರೆ.
ಈ ಯೋಜನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಖನಿಜ ಭವನದಲ್ಲಿ ತಮ್ಮನ್ನು ಭೇಟಿಯಾದ ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರೊಂದಿಗೆ ಸಚಿವರು ಸುದೀರ್ಘ ಚರ್ಚೆ ನಡೆಸಿ, ಯೋಜನೆಗೆ ಸಂಬಂಧಿಸಿದ ಆತಂಕ ಮತ್ತು ಗೊಂದಲಗಳನ್ನು ನಿವಾರಿಸಿದರು. ಇದೇ ವೇಳೆ, ಶೀಘ್ರದಲ್ಲೇ ಸ್ಥಳೀಯ ರೈತರೊಂದಿಗೆ ಸಭೆ ಆಯೋಜಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಕೃಷಿ ನೀರಿಗೆ ಧಕ್ಕೆಯಿಲ್ಲ
ಕಾವೇರಿ ನೀರು ವಿವಾದ ನ್ಯಾಯಮಂಡಳಿಯು ಕೈಗಾರಿಕಾ ಉದ್ದೇಶಗಳಿಗಾಗಿಯೇ ಪ್ರತ್ಯೇಕವಾಗಿ ಮೀಸಲಿಟ್ಟಿರುವ ನೀರನ್ನು ಈ ಯೋಜನೆಗೆ ಬಳಸಿಕೊಳ್ಳಲಾಗುತ್ತದೆಯೇ ಹೊರತು, ಕೃಷಿಗಾಗಿ ಕಾಯ್ದಿರಿಸಿದ ನೀರನ್ನು ಮುಟ್ಟುವುದಿಲ್ಲ. ಕೈಗಾರಿಕೆಗಳಿಗಾಗಿ ಮೀಸಲಿಟ್ಟಿರುವ ಒಟ್ಟು 4 ಟಿಎಂಸಿ ನೀರ ಪೈಕಿ 1.37 ಟಿಎಂಸಿ ನೀರು ಈಗಾಗಲೇ ಬಳಕೆಯಲ್ಲಿದೆ. ಉಳಿದ ಕೋಟಾದಿಂದ 2.5 ಟಿಎಂಸಿ ನೀರನ್ನು ಈ ಕೈಗಾರಿಕಾ ಪೂರೈಕೆ ಯೋಜನೆಗೆ ಬಳಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಭೂಸ್ವಾಧೀನ ಇಲ್ಲದೆ ಕೆರೆಗಳ ಅಭಿವೃದ್ಧಿ:
ಸಚಿವರ ಪ್ರಕಾರ, ಮಳೆಗಾಲದ ತಿಂಗಳುಗಳಲ್ಲಿ ನೇರವಾಗಿ ಕಾವೇರಿ ನದಿಯಿಂದ ನೀರನ್ನು ಪಂಪ್ ಮಾಡಿ ಈ ಕೆರೆಗಳಲ್ಲಿ ಸಂಗ್ರಹಿಸಲಾಗುತ್ತದೆ. ಬಳಿಕ ವರ್ಷದ ಉಳಿದ ದಿನಗಳಲ್ಲಿ ಈ ನೀರನ್ನು ಕೈಗಾರಿಕೆಗಳಿಗೆ ಬಳಸಲಾಗುತ್ತದೆ. ಯಾವುದೇ ಹೆಚ್ಚುವರಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳದೆ, ಕೇವಲ ಕೆರೆಗಳನ್ನು ಹೂಳೆತ್ತಿ ಆಳವಾಗಿಸುವ ಮೂಲಕ ಅಗರ ಮತ್ತು ಮದ್ದೂರು ಕೆರೆಗಳ ನೀರಿನ ಸಂಗ್ರಹ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತದೆ.
ಇದರೊಂದಿಗೆ, ಈ ಜಲಾಶಯಗಳ ಕೆಳಭಾಗದಲ್ಲಿರುವ ಚಿಕ್ಕಹೊಳೆ ಮತ್ತು ಸುವರ್ಣಮುಖಿ ಕೆರೆಗಳನ್ನು ಸಹ ಅಭಿವೃದ್ಧಿಪಡಿಸಲಾಗುವುದು ಮತ್ತು ಈ ಕೆರೆಗಳ ನೀರನ್ನು ವರ್ಷಪೂರ್ತಿ ರೈತರಿಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್ ಭರವಸೆ ನೀಡಿದ್ದಾರೆ.



