ಹೊಸದಿಗಂತ ವರದಿ,ಮಡಿಕೇರಿ:
ಕೊಡಗಿನ ಪ್ರವಾಸಿ ತಾಣ, ದುಬಾರೆಯ ಸಾಕಾನೆ ಶಿಬಿರದಲ್ಲಿ ಎರಡು ಸಾಕಾನೆಗಳ ಕಾದಾಟದ ವೇಳೆ ಆಯ ತಪ್ಪಿ ಬಿದ್ದ ಆನೆಯ ಕೆಳಗೆ ಸಿಲುಕಿ ಮಹಿಳೆಯೊಬ್ಬರು ಸಾವಿಗೀಡಾದ ಹಾಗೂ ಮಾರ್ತಾಂಡ ಆನೆಯ ಸಾವು ಪ್ರಕರಣ ಸಂಬಂಧ ಉಪ ಲೋಕಾಯುಕ್ತ ಕೆ. ಎನ್. ಫಣೀಂದ್ರ ಅವರಿಂದ ಸ್ವಯಂ ಪ್ರೇರಿತ ದೂರು ದಾಖಲು ಮಾಡಿದ್ದಾರೆ.
ವರದಿ ನೀಡಲು ಸೂಚನೆ
ಅರಣ್ಯಾಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ವಿವರಣೆ ಕೋರಿರುವ ಉಪ ಲೋಕಾಯುಕ್ತರು, ಸೋಮವಾರಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ್ ಹಾಗೂ ಕುಶಾಲನಗರ ವಲಯದ ವಲಯ ಅರಣ್ಯಾಧಿಕಾರಿ ರಕ್ಷಿತ್ ಅವರನ್ನು ಎದುರುದಾರರೆಂದು ಪರಿಗಣಿಸುವಂತೆ ಸೂಚಿಸಿದ್ದು, ನಾಲ್ಕು ವಾರದಲ್ಲಿ ಘಟನೆ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಆದೇಶದ ಪ್ರತಿಯನ್ನು ಕಳುಹಿಸಿರುವ ಫಣೀಂದ್ರ ಅವರು, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.



