ಹೊಸದಿಗಂತ ವರದಿ ಧಾರವಾಡ:
ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗಾಗಿ ಕಳೆದ 12 ದಿನಗಳಿಂದ ಸ್ವಾಭಿಮಾನಿ ಹೋರಾಟ ನಡೆಯುತ್ತಿದ್ದು, ಪ್ರತಿಭಟನಾಕಾರರು ಇಂದು ಬೆಳಗ್ಗೆ ಪ್ರತಿಭಟನೆಯ ಸ್ಥಳದಲ್ಲಿಯೇ ಸ್ನಾನ ಮಾಡಿದ್ದಾರೆ.
ಪ್ರತಿಭಟನೆಗೆ ಸರ್ಕಾರ ಸ್ಪಂದಿಸದ ಕಾರಣ ಸೋಮವಾರದಿಂದ ಅಹೋರಾತ್ರಿ ಧರಣಿ ಆರಂಭವಾಗಿದ್ದು, ಹಿರಿಯ ನ್ಯಾಯವಾದಿ, ಹೈಕೋರ್ಟ್ ಹೋರಾಟಗಾರ ಬಿ.ಡಿ. ಹಿರೇಮಠ ಹಾಗೂ ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಕಮತಿ ರಸ್ತೆಯಲ್ಲಿಯೇ ಹಗಲು ರಾತ್ರಿ ಕಳೆಯುತ್ತಿದ್ದಾರೆ. ಇಂದು ಬೆಳಗ್ಗೆ ಪ್ರತಿಭಟನೆ ಮಾಡುತ್ತಿದ್ದ ಜಾಗದಲ್ಲಿಯೇ ಕುಳಿತುಕೊಂಡು ಸಾರ್ವಜನಿಕವಾಗಿ ಸ್ನಾನ ಮಾಡಿದ್ದಾರೆ.
ಹೋರಾಟ ಕೈ ಬಿಡೋದಿಲ್ಲ:
ನಾವು ಯಾವುದೇ ಒತ್ತಡಕ್ಕೆ ಮಣಿದು ಹೋರಾಟ ನಿಲ್ಲಿಸುವವರಲ್ಲ. ನಮ್ಮ ಮನೆ, ಕುಟುಂಬ, ದಿನಚರಿ, ಲೈಫ್ಸ್ಟೈಲ್ ಎಲ್ಲವನ್ನೂ ಬಿಟ್ಟು ಬಂದು ಇಲ್ಲಿ ಕುಳಿತಿದ್ದೇವೆ ಎಂದರೆ ಇದರ ತೀವ್ರತೆ ಅರ್ಥವಾಗಬೇಕು. ಧಾರವಾಡ ಪ್ರತ್ಯೇಕ ಪಾಲಿಕೆ ಘೋಷಣೆ ಆಗುವವರೆಗೂ ಈ ಜಾಗ ಬಿಟ್ಟು ಕದಲೋದಿಲ್ಲ. ಊಟ, ತಿಂಡಿ, ಸ್ನಾನ, ನಿದ್ದೆ ಎಲ್ಲವೂ ಇಲ್ಲಯೇ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.



