ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ನಟಿ ಸಮಂತಾ ರುತ್ ಪ್ರಭು ತಮ್ಮದೇ ‘ಟ್ರಾಲಾಲಾ ಮೂವಿಂಗ್ ಪೀಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಿ, ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಆ್ಯಕ್ಷನ್-ಕಾಮಿಡಿ ಕೌಟುಂಬಿಕ ಚಿತ್ರ ‘ಮಾ ಇಂಟಿ ಬಂಗಾರಂ’. ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುವಾಗ ಸಮಂತಾ, ಈ ಚಿತ್ರದ ನಾಯಕಿ ಪಾತ್ರಕ್ಕೆ ತಾವು ಮೊದಲ ಆಯ್ಕೆಯಾಗಿರಲಿಲ್ಲ, ಬದಲಿಗೆ ನಿರ್ದೇಶಕಿ ನಂದಿನಿ ರೆಡ್ಡಿ ಮೊದಲು ನಟಿ ಸಾಯಿ ಪಲ್ಲವಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಸ್ಕ್ರಿಪ್ಟ್ ಬರೆದಿದ್ದರು ಎಂಬ ಕೌತುಕದ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಸಮಂತಾ ಹೇಳಿದ್ದೇನು?
ಈ ಬಗ್ಗೆ ಸಮಂತಾ ಮಾತನಾಡಿ, “ನಮ್ಮ ಪ್ರೊಡಕ್ಷನ್ ಬ್ಯಾನರ್ ಮೂಲಕ ಮಹಿಳಾ ಪ್ರಧಾನ ಚಿತ್ರಗಳಿಗೆ ಆದ್ಯತೆ ನೀಡುವುದು ನಮ್ಮ ಉದ್ದೇಶ. ಹಾಗಾಗಿ ಈ ಕಥೆಯನ್ನು ಮೊದಲು ಸಾಯಿ ಪಲ್ಲವಿಗೆ ಪಿಚ್ ಮಾಡಲು ಯೋಜಿಸಲಾಗಿತ್ತು. ಆದರೆ ಅವರು ಇತರ ಸಿನಿಮಾಗಳ ಚಿತ್ರೀಕರಣದಲ್ಲಿ ಬಿಜಿಯಾಗಿದ್ದರಿಂದ ಸಮಯವಿರಲಿಲ್ಲ. ನಂತರ ಚಿತ್ರಕಥೆಯನ್ನು ನನಗಾಗಿ ಸ್ವಲ್ಪ ಬದಲಾಯಿಸಲಾಯಿತು. ಭವಿಷ್ಯದಲ್ಲಿ ನನ್ನ ಬ್ಯಾನರ್ ಅಡಿಯಲ್ಲಿ ಸಾಯಿ ಪಲ್ಲವಿಯೊಂದಿಗೆ ಕೆಲಸ ಮಾಡುವ ಆಸೆಯಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ಸಾಯಿ ಪಲ್ಲವಿ ನೀಡಿದ ಭಾವುಕ ಪ್ರತಿಕ್ರಿಯೆ
ಸಮಂತಾ ಈ ಪೋಸ್ಟ್ಗೆ ಇನ್ಸ್ಟಾಗ್ರಾಮ್ನಲ್ಲೇ ಪ್ರತಿಕ್ರಿಯಿಸಿರುವ ಸಾಯಿ ಪಲ್ಲವಿ, “ಈ ಸಿನಿಮಾ ನಿಮಗೇ ತಲುಪಬೇಕಿತ್ತು ಸಮಂತಾ ಗಾರು.. ನಿಮಗೂ ಮತ್ತು ನಂದಿನಿ ರೆಡ್ಡಿಗೂ ನನ್ನ ಕಡೆಯಿಂದ ದೊಡ್ಡದೊಂದು ಹಗ್ ಹಾಗೂ ಶುಭಾಶಯಗಳು. ಖಂಡಿತ ನಾವು ಶೀಘ್ರದಲ್ಲೇ ಒಟ್ಟಿಗೆ ಕೆಲಸ ಮಾಡೋಣ” ಎಂದು ಬರೆದುಕೊಂಡಿದ್ದಾರೆ.
ಸಿನಿಮಾ ಬಿಡುಗಡೆ ಯಾವಾಗ?
ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರವು ಇದೇ ಜೂನ್ 19,ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಚಿತ್ರದಲ್ಲಿ ದಿಗಂತ್ ಮಂಚಾಲೆ ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ.



