ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ ರದ್ದಾದ ಆಘಾತವನ್ನು ಸಹಿಸಲಾಗದೆ ಯುವತಿಯೊಬ್ಬಳು ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಆರ್ ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿ ನಡೆದಿದೆ.
ಮೃತಳನ್ನು ಕೆಆರ್ ಪೇಟೆ ತಾಲೂಕಿನ ವಳಗೆರೆ ಮೆಣಸ ಗ್ರಾಮದ 26 ವರ್ಷದ ಕಾವ್ಯ ಎಂದು ಗುರುತಿಸಲಾಗಿದೆ.
ಕೇವಲ 15 ದಿನಗಳ ಹಿಂದೆ ಹಾಸನ ಮೂಲದ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಆತನ ಮನೆಯವರು ಆಕಸ್ಮಿಕವಾಗಿ ಮದುವೆ ಬೇಡವೆಂದು ನಿರ್ಧರಿಸಿ ಮದುವೆಯನ್ನು ರದ್ದುಮಾಡಿದ್ದರು. ಇದರಿಂದ ಮಾನಸಿಕ ಆಘಾತಕ್ಕೊಳಗಾದ ಕಾವ್ಯ, ಶುಕ್ರವಾರ ತನ್ನ ಕೆಲಸದ ಸ್ಥಳವಾದ ರೈತ ಸಂಪರ್ಕ ಕೇಂದ್ರದಲ್ಲೇ ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಳಾದಳು.
ಅಸ್ವಸ್ಥಳಾದ ಕಾವ್ಯ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈ ದುರ್ಘಟನೆ ಕಿಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.