September 6, 2026
Sunday, September 6, 2026
spot_img

ಎಲ್ ನಿನೋ ಆತಂಕದ ನಡುವೆ ಕರಾವಳಿಗೆ ನಾಲ್ಕು ದಿನ ಭಾರೀ ಮಳೆ ಎಚ್ಚರಿಕೆ: ಮುಂಗಾರು ಕೊನೆಗೂ ವಾಪಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:


ಕಳೆದ ಕೆಲವು ದಿನಗಳಿಂದ ಮಳೆಯ ಕೊರತೆ ಎದುರಿಸುತ್ತಿದ್ದ ಕರಾವಳಿ ಭಾಗದ ಜನರಿಗೆ ಭಾರತೀಯ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ.
ಜೂನ್ 21ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಅದು ಮುನ್ಸೂಚನೆ ನೀಡಿದೆ. ಆದರೆ ಇತ್ತ ಎಲ್ ನಿನೋ ವಿದ್ಯಮಾನ ಕೂಡಾ ಪ್ರಭಲಗೊಳ್ಳುತ್ತಿದ್ದು, ಎಲ್ಲ ಮಳೆ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುತ್ತಿದೆ.

ಮಳೆಯ ಕೊರತೆಯಿಂದಾಗಿ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ಭತ್ತದ ಕೃಷಿ ಚಟುವಟಿಕೆಗಳು ಈಗಾಗಲೇ ವಿಳಂಬವಾಗಿವೆ. ಗದ್ದೆಗಳಲ್ಲಿ ನೀರಿನ ಕೊರತೆ ಕಂಡುಬಂದಿದ್ದು, ನಾಟಿ ಕಾರ್ಯಗಳು ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಈ ನಡುವೆ ನಾಲ್ಕು ದಿನ ಭಾರೀ ಮಳೆ ಬೀಳಲಿದೆ ಎಂಬ ಮುನ್ಸೂಚನೆ ರೈತರಲ್ಲಿ ಆಶಾಭಾವನೆ ಮೂಡಿಸಿದ್ದರೂ, ಮುಂದಿನ ತಿಂಗಳುಗಳಲ್ಲಿ ಎಲ್ ನಿನೋ ಪರಿಣಾಮ ಹೆಚ್ಚಾದರೆ ಕೃಷಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗುವ ಭೀತಿ ಕಾಡುತ್ತಿದೆ.

ಹವಾಮಾನ ಇಲಾಖೆ ಮುನ್ಸೂಚನೆಯಂತೆ, ಜೂನ್ 21ರಿಂದ ಕರಾವಳಿ ಭಾಗದಲ್ಲಿ ಮಳೆಯ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಕಳೆದ ಹಲವು ದಿನಗಳಿಂದ ಮಳೆಯ ನಿರೀಕ್ಷೆಯಲ್ಲಿದ್ದ ಕರಾವಳಿಗೆ ವರುಣ ಕೊನೆಗೂ ಕರುಣೆ ತೋರುತ್ತಾನೆಯೇ? ಅಥವಾ ಎಲ್ ನಿನೋ ಪರಿಣಾಮ ಮತ್ತೆ ಮುಂಗಾರಿಗೆ ಬ್ರೇಕ್ ಹಾಕುತ್ತದೆಯೇ? ಎಂಬ ಪ್ರಶ್ನೆ ಇದೀಗ ಎಲ್ಲರನ್ನು ಕಾಡುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !