ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಸೂಪರ್ಸ್ಟಾರ್ ಆಮಿರ್ ಖಾನ್ ಸದ್ಯ ನಟನೆಗಿಂತ ಹೆಚ್ಚಾಗಿ ಸಿನಿಮಾ ನಿರ್ಮಾಣದತ್ತ ಗಮನ ಹರಿಸುತ್ತಿದ್ದಾರೆ. ಇದೀಗ ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಮೂಲಕ ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜೀವನದ ಕುರಿತು ವಿಶೇಷ ಸಾಕ್ಷ್ಯಚಿತ್ರ (ಡಾಕ್ಯುಮೆಂಟರಿ) ನಿರ್ಮಿಸಲು ಸಜ್ಜಾಗಿದ್ದಾರೆ.
ಸ್ವಾತಿ ಚಕ್ರವರ್ತಿ ನಿರ್ದೇಶನ
ಈ ಹಿಂದೆ ‘ರುಬಾರು ರೋಶ್ನಿ’ (2019) ಎಂಬ ಯಶಸ್ವಿ ಡಾಕ್ಯುಮೆಂಟರಿ ನಿರ್ದೇಶಿಸಿದ್ದ ಖ್ಯಾತ ಬರಹಗಾರ್ತಿ ಸ್ವಾತಿ ಚಕ್ರವರ್ತಿ ಅವರೇ ಈ ಹೊಸ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಒಡಿಶಾದ ಪುಟ್ಟ ಹಳ್ಳಿಯಿಂದ ಆರಂಭವಾಗಿ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಪೀಠದವರೆಗಿನ ಮುರ್ಮು ಅವರ ರೋಚಕ ಪಯಣವನ್ನು ಈ ಚಿತ್ರ ಅನಾವರಣಗೊಳಿಸಲಿದೆ.
ಹಳ್ಳಿಯಲ್ಲೇ ಶೂಟಿಂಗ್ ಕಂಪ್ಲೀಟ್!
ಈಗಾಗಲೇ ದ್ರೌಪದಿ ಮುರ್ಮು ಅವರು ಹುಟ್ಟಿ ಬೆಳೆದ ಒಡಿಶಾದ ಹಳ್ಳಿಯಲ್ಲಿ ಪ್ರಮುಖ ಭಾಗಗಳ ಚಿತ್ರೀಕರಣ ಮುಕ್ತಾಯಗೊಂಡಿದೆ. ಅವರ ಬಾಲ್ಯದ ದಿನಗಳನ್ನು ನೈಜವಾಗಿ ಮರುಸೃಷ್ಟಿಸಲು ಸ್ಥಳೀಯ ಕಲಾವಿದರನ್ನೇ ಬಳಸಿಕೊಳ್ಳಲಾಗಿದೆ. ಅವರ ವೈಯಕ್ತಿಕ ಜೀವನದ ಕಷ್ಟಗಳು, ಸಾವು-ನೋವುಗಳು ಮತ್ತು ಸಾರ್ವಜನಿಕ ಬದುಕಿನ ಹೋರಾಟದ ಕಥೆ ಇದರಲ್ಲಿರಲಿದೆ.
ರಾಷ್ಟ್ರಪತಿಗಳ ಈ ಸ್ಪೂರ್ತಿದಾಯಕ ಬಯೋಪಿಕ್ ಮಾದರಿಯ ಸಾಕ್ಷ್ಯಚಿತ್ರದ ಮೇಲೆ ದೇಶಾದ್ಯಂತ ಭಾರಿ ಕುತೂಹಲ ಮೂಡಿದೆ.



