June 22, 2026
Monday, June 22, 2026
spot_img

ರುದ್ರಪ್ಪ ಮಾನಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡಿ: ಬಂಜಾರ ಸಂಘ ಹಕ್ಕೋತ್ತಾಯ

ಹೊಸದಿಗಂತ ವರದಿ ಬೆಳಗಾವಿ:

ಹಾವೇರಿ ಶಾಸಕರು ಮತ್ತು ವಿಧಾನಸಭೆಯ ಮಾಜಿ ಉಪಾಧ್ಯಕ್ಷರು ಆಗಿರುವ ರುದ್ರಪ್ಪ ಮಾನಪ್ಪ ಲಮಾಣಿ ಅವರಿಗೆ ಸಚಿವ ಸಂಪುಟದಲ್ಲಿ ಕ್ಯಾಬಿನೇಟ್ ದರ್ಜೆ ಸಚಿವರನ್ನಾಗಿ ಮಾಡುವಂತೆ ಬೆಳಗಾವಿ ಜಿಲ್ಲಾ ಬಂಜಾರ ಸಂಘ ಹಕ್ಕೋತ್ತಾಯ ಮಂಡಿಸಿದೆ.

ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಮಾನಪ್ಪ ರಾಠೋಡ ಅವರು, ಕರ್ನಾಟಕ ರಾಜ್ಯದಲ್ಲಿ ಅಷ್ಟೇ ಅಲ್ಲದೇ ದೇಶ್ಯಾದ್ಯಂತ ಅಪಾರ ಸಂಖ್ಯೆಯಲ್ಲಿ ನೆಲೆಸಿರುವ ಬಂಜಾರ (ಲಂಬಾಣಿ) ಸಮುದಾಯ ತನ್ನದೇ ಆದ ಭಾಷೆ, ಸಂಸ್ಕೃತಿಕ, ಕಲೆ, ಉಡುಗೆ ತೊಡಗೆಯಿಂದ ಗುರುತಿಸಿಕೊಂಡಿದೆ. ಬಂಜಾರ ಸಮುದಾಯ ಎಂದಿಗೂ ಸ್ವಾಭಿಮಾನದಿಂದ ಜೀವನ ನಡೆಸುವ ಸಮಾಜ. ಕರ್ನಾಟಕ ರಾಜ್ಯದಲ್ಲಿ ಸುಮಾರು 60 ಲಕ್ಷಕ್ಕೂ ಹೆಚ್ಚು ಜನ ಪಟ್ಟಣ, ನಗರ ಪ್ರದೇಶ ಹಾಗೂ ತಾಂಡಾಗಳಲ್ಲಿ ನೆಲೆಸಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರಲು ಬಂಜಾರ (ಲಂಬಾಣಿ) ಸಮುದಾಯವು ನೀಡಿರುವ ಬೆಂಬಲವನ್ನು ಯಾರೂ ಅಲ್ಲಗಳೆಯಲೂ ಸಾಧ್ಯವಿಲ್ಲ. ನೂತನ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರ ಮಂತ್ರಿ ಮಂಡಳದಲ್ಲಿ ಈಗ ರಚನೆ ಮಾಡುವ ಮಂತ್ರಿಮಂಡಲದಲ್ಲಿ ರುದ್ರಪ್ಪ ಲಮಾಣಿ ಅವರಿಗೆ ಕ್ಯಾಬಿನೇಟ್ ದರ್ಜೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.

ಇದನ್ನೂ ಓದಿ:

ರಾಜ್ಯದ ಇತಿಹಾಸದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರು ಲಂಬಾಣಿ ಸಮುದಾಯಕ್ಕೆ ಮೊದಲ ಹಂತದಲ್ಲಿ ಸಚಿವ ಸಂಪುಟದಲ್ಲಿ ಲಂಬಾಣಿ ಸಮುದಾಯಕ್ಕೆ ಅವಕಾಶ ನೀಡದಿರುವುದು ರಾಜ್ಯದಲ್ಲಿರುವ ಲಂಬಾಣಿ ಸಮುದಾಯದ ತೀವ್ರ ಅಸಮಾಧಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕೃಷಿ ಕಾರ್ಮಿಕರಾಗಿಯೆ ಪರಿಶ್ರಮದ ಬದುಕು ಸಾಗಿಸುತ್ತಿರುವ ಲಂಬಾಣಿಗರು ಇನ್ನೂ ಕಡುಬಡತನದಲ್ಲಿಯೇ ಇದ್ದಾರೆ. ಹೊಟ್ಟೆಪಾಡಿಗಾಗಿ ಕೆಲಸವನ್ನರಿಸಿಕೊಂಡು ದೂರು ದೂರದ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಉದ್ಯೋಗ ಭದ್ರತೆ ಇಲ್ಲದೇ ಆರ್ಥಿಕವಾಗಿ ಶೈಕ್ಷಣಿಕವಾಗಿಯೂ ಅತ್ಯಂತ ಸಂಕಷ್ಟದಲ್ಲಿರುವ ಲಂಬಾಣಿ ಸಮುದಾಯದ ಪರವಾಗಿ ಸರ್ಕಾರದಲ್ಲಿ ಧ್ವನಿ ಎತ್ತುವವರು ಯಾರೂ ಇಲ್ಲದಂತಾಗಿದೆ.

ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಈ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸನ್ಮಾನ್ಯ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ಹಾಗೂ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಇವರಿಗೆ ಬೆಳಗಾವಿ ಜಿಲ್ಲಾ ಬಂಜಾರ ಸಂಘ ಆಗ್ರಹಿಸುತ್ತಾರೆ.

ಲಂಬಾಣಿ ಸಮುದಾಯದ ಈ ಕೋರಿಕೆ ಈಡೇರದಿದ್ದಲ್ಲಿ ಮುಂದೆ ಬರುವ ಗ್ರಾಮ ಪಂಚಾಯತ, ತಾಲೂಕ ಪಂಚಾಯತ, ಜಿಲ್ಲಾ ಪಂಚಾಯತ ಹಾಗೂ ಎಮ್.ಎಲ್.ಎ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸಹ ಈ ಮೂಲಕ ನೀಡುತ್ತಿದ್ದೇವೆ ಎಂದರು

ಈ ವೇಳೆ ಪಾಂಡು ನಾಯಕ್, ದೇವೇಂದ್ರ ನಾಯ್ಕ್, ರಾಜು ರಾಠೋಡ್ ಸೇರಿದಂತೆ ಮತ್ತಿತರರು ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !