June 27, 2026
Saturday, June 27, 2026
spot_img

ಅಧಿಕಾರ ಹೋದರೂ ಕಿಂಚಿತ್ತೂ ಕಮ್ಮಿಯಾಗಿಲ್ಲ ಸಿದ್ದು ಕ್ರೇಜ್: ತವರು ಜಿಲ್ಲೆಯಲ್ಲಿ ಮಾಜಿ ಸಿಎಂಗೆ ಭವ್ಯ ಸ್ವಾಗತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯ ರಾಜಕಾರಣದ ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ, ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮೊದಲ ಬಾರಿಗೆ ಇಂದು ಶನಿವಾರ ಸಂಜೆ ತಮ್ಮ ಸಂಸದೀಯ ಹಾಗೂ ತವರು ಕ್ಷೇತ್ರವಾದ ಮೈಸೂರಿಗೆ ಆಗಮಿಸಿದರು. ಹೈಕಮಾಂಡ್ ಆದೇಶದಂತೆ ಅಧಿಕಾರ ಹಸ್ತಾಂತರಿಸಿದ ಬಳಿಕ ಸ್ವಗ್ರಾಮಕ್ಕೆ ಬಂದ ನಾಯಕನನ್ನು ನೋಡಲು ಸಾವಿರಾರು ಜನ ಮೈಸೂರಿನ ಹೈವೇ ಸರ್ಕಲ್‌ನಲ್ಲಿ ಜಮಾಯಿಸಿದ್ದರು.

ಸಿದ್ದುಗೆ ಅದ್ಧೂರಿ ಸ್ವಾಗತ:

ಮೈಸೂರಿನ ಮೌಲಾನಾ ಅಬುಲ್ ಕಲಾಂ ಆಜಾದ್ ವೃತ್ತಕ್ಕೆ (ಹೈವೇ ಸರ್ಕಲ್) ಸಿದ್ದರಾಮಯ್ಯ ಬರುತ್ತಿದ್ದಂತೆ ಜಯಘೋಷಗಳು ಮೊಳಗಿದವು. ಅಲ್ಲಿಂದ ಅವರನ್ನು ತೆರೆದ ಜೀಪ್‌ನಲ್ಲಿ ಅತ್ಯಂತ ಅದ್ಧೂರಿಯಾಗಿ ಮೆರವಣಿಗೆಯ ಮೂಲಕ ಕರೆದೊಯ್ಯಲಾಯಿತು. ನೆಚ್ಚಿನ ನಾಯಕನನ್ನು ಬರಮಾಡಿಕೊಳ್ಳಲು ಮೈಸೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೇಬಿನ ಹಣ್ಣುಗಳಿಂದ ಸಿದ್ಧಪಡಿಸಲಾಗಿದ್ದ ಬೃಹತ್ ಹಾರವನ್ನು ಕ್ರೇನ್ ಮೂಲಕ ಸಿದ್ದರಾಮಯ್ಯಗೆ ಹಾಕಿ ಗೌರವಿಸಲಾಯಿತು.ಸ್ವಾಗತ ಕಾರ್ಯಕ್ರಮಕ್ಕೆ ಮಂಗಳವಾದ್ಯಗಳು ಹಾಗೂ ಸಾಂಪ್ರದಾಯಿಕ ಜಾನಪದ ಕಲಾತಂಡಗಳ ನೃತ್ಯಗಳು ವಿಶೇಷ ಮೆರುಗು ನೀಡಿದ್ದವು.

ಇದನ್ನೂ ಓದಿ:

ಭೇಟಿಯ ಮುಂದಿನ ಕಾರ್ಯಕ್ರಮಗಳೇನು?:

ಕಾರ್ಯಕರ್ತರೊಂದಿಗೆ ಕೆಲಕಾಲ ಸಂವಾದ ನಡೆಸಿದ ಬಳಿಕ ಸಿದ್ದರಾಮಯ್ಯ ಟಿ. ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿಗೆ ತೆರಳಿದ್ದಾರೆ. ಅಲ್ಲಿ ವಾಸ್ತವ್ಯ ಹೂಡಲಿರುವ ಅವರು, ಭಾನುವಾರ ಮೈಸೂರಿನಲ್ಲಿ ಆಯೋಜಿಸಲಾಗಿರುವ ಕಾಂಗ್ರೆಸ್ ಪಕ್ಷದ ಮಹತ್ವದ ‘ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ’ (SIR) ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಭಾಗವಹಿಸಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !