ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಂಡುಕೇಳರಿಯದ ಭೀಕರ ಭೂಕಂಪದಿಂದ ತತ್ತರಿಸಿರುವ ವೆನೆಜುವೆಲಾಗೆ ಭಾರತ ಕಳುಹಿಸಿರುವ ತುರ್ತು ಮಾನವೀಯ ನೆರವು ತಂಡ ಅಲ್ಲಿಗೆ ಕಾಲಿಟ್ಟಿದ್ದು, ರಕ್ಷಣಾ ಕಾರ್ಯ ಆರಂಭಿಸಿದೆ.
‘ಆಪರೇಷನ್ ಅಮಿಸ್ತಾದ್’ (Operation Amistad) ಹೆಸರಿನ ವಿಶೇಷ ಕಾರ್ಯಾಚರಣೆ ಮೂಲಕ ಭಾರತ, ವೆನೆಜುವೆಲಾ ಸಂತ್ರಸ್ತರ ಕಣ್ಣೀರು ಒರೆಸುವ ಕಾರ್ಯ ಮಾಡುತ್ತಿದೆ. ಇಗಾಗಲೇ ಭಾರತೀಯ ವಾಯುಪಡೆಯ ಎರಡು C-17 ಗ್ಲೋಬ್ಮಾಸ್ಟರ್ ವಿಮಾನಗಳ ಮೂಲಕ ವೈದ್ಯಕೀಯ ತಂಡ, ಪರಿಹಾರ ಸಾಮಗ್ರಿ ಹಾಗೂ ತುರ್ತು ವೈದ್ಯಕೀಯ ಉಪಕರಣಗಳನ್ನು ರವಾನಿಸಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ಕಾರ್ಯಾಚರಣೆಯ ಮಾಹಿತಿ ಹಂಚಿಕೊಂಡಿದ್ದು, ಸಂಕಷ್ಟದ ಸಮಯದಲ್ಲಿ ವೆನೆಜುವೆಲಾದ ಜನರೊಂದಿಗೆ ಭಾರತ ದೃಢವಾಗಿ ನಿಂತಿದೆ ಎಂದು ಹೇಳಿದ್ದಾರೆ.
ನೆರವು ಕಾರ್ಯಾಚರಣೆಯ ಭಾಗವಾಗಿ 41 ಸದಸ್ಯರ ವೈದ್ಯಕೀಯ ತಂಡ, ಫೀಲ್ಡ್ ಆಸ್ಪತ್ರೆ ಘಟಕ, 30 ಟನ್ಗೂ ಹೆಚ್ಚು ಪರಿಹಾರ ಸಾಮಗ್ರಿ, 6 ಟನ್ ಔಷಧಿ ಮತ್ತು ವೈದ್ಯಕೀಯ ಉಪಕರಣಗಳು, ಜೊತೆಗೆ ತುರ್ತು ಚಿಕಿತ್ಸೆಗೆ ಬಳಸುವ ಎರಡು ‘BHISHM Cube’ ಪೋರ್ಟಬಲ್ ಆಸ್ಪತ್ರೆಗಳನ್ನು ಕಳುಹಿಸಲಾಗಿದೆ. ಈ ತಂಡವು ವೆನೆಜುವೆಲಾದ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಗಾಯಾಳುಗಳಿಗೆ ಚಿಕಿತ್ಸೆ, ವೈದ್ಯಕೀಯ ನೆರವು ಹಾಗೂ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದೆ. ಭೂಕಂಪದ ದುರಂತದ ಬಳಿಕ ತಕ್ಷಣ ಸ್ಪಂದಿಸಿರುವ ಭಾರತ, ಮಾನವೀಯ ನೆರವಿನ ಮೂಲಕ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.



