July 1, 2026
Wednesday, July 1, 2026
spot_img

ಹೈಕಮಾಂಡ್ ತೀರ್ಮಾನವೇ ಅಂತಿಮ: ಮುಂದಿನ ಸಿಎಂ ರೇಸ್ ಬಗ್ಗೆ ಜಿ.ಪರಮೇಶ್ವರ್ ಮಾರ್ಮಿಕ ನುಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದಂತೆ ಮುಂದಿನ ಎರಡು ವರ್ಷಗಳ ಕಾಲ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಹಾಗೂ ತಾವು ಉಪಮುಖ್ಯಮಂತ್ರಿಯಾಗಿ ಜವಾಬ್ದಾರಿ ನಿಭಾಯಿಸುವುದಾಗಿ ಪ್ರಕಟಿಸಿದ್ದಾರೆ. ಮುಂದಿನ ಬಾರಿ ತಾವೇ ಸಿಎಂ ಆಗುತ್ತೀರಾ ಎಂಬ ಪ್ರಶ್ನೆಗೆ, “ಹೈಕಮಾಂಡ್ ನಿರ್ಧಾರವೇ ಅಂತಿಮ” ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಪ್ರಣಾಳಿಕೆ ಭರವಸೆ ಹಾಗೂ ಉತ್ತರ ಕರ್ನಾಟಕದ ಪ್ರಗತಿ

ಚುನಾವಣಾ ಪ್ರಣಾಳಿಕೆಯ 592 ಭರವಸೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ಇವುಗಳನ್ನು ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆಗಳಾಗಿ ವಿಂಗಡಿಸಿ, ಈಗಾಗಲೇ ಅಲ್ಪಾವಧಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಇದೇ ವೇಳೆ, ಉತ್ತರ ಕರ್ನಾಟಕದ ನೀರಾವರಿ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಹೂಡಿಕೆ ಮಾಡುವ ಉದ್ಯಮಿಗಳಿಗೆ ತೆರಿಗೆ ವಿನಾಯಿತಿ, ಭೂಸ್ವಾಧೀನ ಸರಳೀಕರಣ ಹಾಗೂ ನೀರಿನ ಸೌಕರ್ಯ ಸೇರಿದಂತೆ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದರು.

ಗೃಹಜ್ಯೋತಿ ಗೊಂದಲ ಮತ್ತು ಹೇಮಾವತಿ ಲಿಂಕ್ ಕೆನಾಲ್ ವಿವಾದ

ಗೃಹಜ್ಯೋತಿ ಯೋಜನೆಗೆ ಜಾತಿ ಪ್ರಮಾಣಪತ್ರ ಕಡ್ಡಾಯಗೊಳಿಸಲಾಗುತ್ತಿದೆಯೇ ಎಂಬ ಗೊಂದಲಕ್ಕೆ ಉತ್ತರಿಸಿದ ಅವರು, “ಈ ಬಗ್ಗೆ ಮಾಹಿತಿಯಿಲ್ಲ, ಹಳೆಯ ನಿಯಮದಂತೆಯೇ ಪ್ರಕ್ರಿಯೆ ನಡೆಯಲಿದೆ” ಎಂದರು. ಇನ್ನು ಹೇಮಾವತಿ ಲಿಂಕ್ ಕೆನಾಲ್ ಯೋಜನೆಗೆ ಸ್ವಪಕ್ಷದ ಶಾಸಕರಿಂದಲೇ ವ್ಯಕ್ತವಾಗುತ್ತಿರುವ ವಿರೋಧದ ಕುರಿತು ಪ್ರತಿಕ್ರಿಯಿಸಿ, “ಇದು ಕ್ಯಾಬಿನೆಟ್ ಅನುಮೋದಿತ ಯೋಜನೆಯಾಗಿದ್ದು, ಅರ್ಧದಷ್ಟು ಕೆಲಸ ಮುಗಿದಿದೆ. ವಿರೋಧಿಸುತ್ತಿರುವ ಶಾಸಕರ ಮನವೊಲಿಸಿ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ” ಎಂದು ಸ್ಪಷ್ಟಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !