ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ 72 ವರ್ಷದ ಕೈದಿಯೊಬ್ಬರು ಹೊರಕ್ಕೆ ಬಂದಿದ್ದಾರೆ. ಸತತ 37 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ ದೇಶದ ಮೊದಲ ಕೈದಿ ಸಾಯಿಬಣ್ಣ. ಎನ್ ನಾಟೀಕರ್ ಇದೀಗ ರಿಲೀಸ್ ಆಗಿದ್ದಾರೆ.
ಎರಡು ಕೊಲೆ ಮಾಡಿದ್ದ ಆರೋಪದ ಮೇಲೆ ಜೈಲು ಸೇರಿದ್ದ ಸಾಯಿಬಣ್ಣ ನಾಲ್ಕು ದಶಕಗಳಿಂದ ಜೈಲಿನಲ್ಲಿ ಇದ್ದರು. ಇದೀಗ ತಮ್ಮ ಇಳಿವಯಸ್ಸಿನಲ್ಲಿ ಹೊರಕ್ಕೆ ಬಂದಿದ್ದು, ಮುಂದೇನು ಮಾಡುತ್ತಾರೆ? ಎಲ್ಲಿಗೆ ಹೋಗುತ್ತಾರೆ ಎನ್ನುವ ಪ್ರಶ್ನೆ ಎದುರಾಗಿದೆ.
ಹಿನ್ನೆಲೆ ಏನು?
ಸಾಯಿಬಣ್ಣ 1988ರಲ್ಲಿ ತಮ್ಮ ಪತ್ನಿ ಮಲ್ಕವ್ವ ಎಂಬಾಕೆಯನ್ನು ಶೀಲ ಶಂಕೆಯಿಂದಾಗಿ ಕೊಲೆ ಮಾಡಿದ್ದ. ಆಗ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ನಂತರ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಸಾಯಿಬಣ್ಣ ಜೈಲಿನಿಂದ ಹೊರಬಂದ ನಂತರ ನಾಗಮ್ಮ ಎಂಬಾಕೆಯನ್ನು ಮದುವೆಯಾಗಿದ್ದರು. ಇವರಿಗೆ ಒಂದು ಹೆಣ್ಣು ಮಗುವೂ ಹುಟ್ಟಿತ್ತು. ಆದರೆ ಕೆಲ ಸಮಯದ ನಂತರ ನಾಗಮ್ಮನ ಮೇಲೂ ಅನುಮಾನಪಟ್ಟು ಆಕೆ ಹಾಗೂ ಪುಟ್ಟ ಮಗಳು ವಿಜಯಲಕ್ಷ್ಮಿಯನ್ನು ಕೊಂದುಹಾಕಿದ್ದ.
ಸಹಕಾರ ವಲಯದಲ್ಲಿ ಕೆಲಸ ಮಾಡುತ್ತಿದ್ದ ಸಾಯಿಬಣ್ಣ ಈ ಭೀಕರ ಕೊಲೆಗಳಿಂದಾಗಿ ಕೆಲಸ ಕಳೆದುಕೊಂಡಿದ್ದಲ್ಲದೆ, ಇಂದು 1 ಕೋಟಿ ರೂಪಾಯಿಗೂ ಅಧಿಕ ಬೆಲೆಬಾಳುವ 10 ಎಕರೆ ಜಮೀನನ್ನೂ ಕಳೆದುಕೊಂಡಿದ್ದಾನೆ. 2003 ರಲ್ಲಿ ವಿಚಾರಣಾ ನ್ಯಾಯಾಲಯವು ಈ ಜೋಡಿ ಕೊಲೆಯ ಕ್ರೌರ್ಯವನ್ನು ಪರಿಗಣಿಸಿ ಈತನಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಆದರೆ ತದನಂತರ ಕರ್ನಾಟಕ ಹೈಕೋರ್ಟ್ ಇದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತನೆಗೊಳಿಸಿತು. ಸಾಯಿಬಣ್ಣ ಸುಮಾರು ಹತ್ತು ವರ್ಷಗಳ ಕಾಲ ಜೈಲಿನಲ್ಲಿ ಏಕಾಂತ ವಾಸ ಅನುಭವಿಸಿದ್ದನ್ನು ಹೈಕೋರ್ಟ್ ಕಾನೂನುಬಾಹಿರ ಮತ್ತು ಅತಿಮಾನುಷ ಎಂದು ಪರಿಗಣಿಸಿತು. ಜೊತೆಗೆ ಈತನ ಕ್ಷಮಾದಾನ ಅರ್ಜಿಯ ನಿರ್ಧಾರದಲ್ಲಿ ಆದ ವಿಳಂಬವೂ ಈತನಿಗೆ ವರದಾನವಾಗಿ ಪರಿಣಮಿಸಿ, ಈಗ 37 ವರ್ಷಗಳ ಬಳಿಕ ಬಿಡುಗಡೆಗೆ ಹಾದಿ ಮಾಡಿಕೊಟ್ಟಿದೆ.
ಈಗಲೂ ಪಶ್ಚಾತ್ತಾಪ ಇಲ್ಲ!
ನನ್ನ ಹೆಂಡತಿಯರು ದಾರಿ ತಪ್ಪಿದ್ದರು. ಅದಕ್ಕೆ ಕೊಂದೆ. ಮೊದಲ ಬಾರಿಗೆ ಹೆಂಡತಿ ಜೊತೆ ಬೇರೆಯವನು ಇದ್ದ, ಸಿಕ್ಕಿಹಾಕಿಕೊಂಡ ತಕ್ಷಣ ಅವನು ಓಡಿಹೋದ ಸಿಟ್ಟಿನಲ್ಲಿ ಮೊದಲ ಹೆಂಡತಿಯನ್ನು ಕೊಂದೆ. ಇನ್ನು ಎರಡನೇ ಮದುವೆಯಲ್ಲಿ ನನ್ನ ಅತ್ತೆ ಕಿರಿಕಿರಿ ಜನ, ಮಗಳನ್ನು ದಾರಿ ತಪ್ಪಿಸಿದ್ದಳು ಅದಕ್ಕೆ ಕೊಂದೆ. ಹೆಣ್ಣಿಗೆ ಕಣ್ಣು ಹಾಣದಿದ್ದರೂ, ಮಾತು ಬರದಿದ್ದರೂ ಪರವಾಗಿಲ್ಲ ಶೀಲ ಮುಖ್ಯ ಎಂದು ಹೇಳಿದ್ದಾನೆ.



