ಹೊಸದಿಗಂತ ವರದಿ ಮಡಿಕೇರಿ:
ಮಡಿಕೇರಿ ನಗರದಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಪರಿಣಾಮವಾಗಿ ಇಲ್ಲಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಏರು ರಸ್ತೆಯಲ್ಲಿ ಭೂಕುಸಿತ ಉಂಟಾಗಿದೆ.
ಇದರಿಂದಾಗಿ ನಗರಸಭೆ ವತಿಯಿಂದ ನಿರ್ಮಿಸಲಾಗಿದ್ದ ಸುಮಾರು 35 ಲಕ್ಷ ರೂ. ವೆಚ್ಚದ ಪಾದಚಾರಿ ಮಾರ್ಗ ಕೊಚ್ಚಿ ಹೋಗಿದೆ. ಹಳೆ ಖಾಸಗಿ ಬಸ್ ನಿಲ್ದಾಣದಿಂದ ಮಳೆ ನೀರು ಈ ಪಾದಚಾರಿ ಮಾರ್ಗದ ಬದಿಯಲ್ಲೇ ಹರಿಯುತ್ತಿದ್ದ ಪರಿಣಾಮ ಈ ಭೂಕುಸಿತ ಉಂಟಾಗಿರುವುದಾಗಿ ಹೇಳಲಾಗಿದೆ.

ಈ ಪಾದಚಾರಿ ಮಾರ್ಗದ ಕೆಳಭಾಗದಲ್ಲಿ ರಾಜಕಾಲುವೆಯೂ ಹರಿಯುತ್ತಿದ್ದು, ಮತ್ತಷ್ಟು ಭೂಕುಸಿತವಾಗುವ ಆತಂಕವಿರುವುದರಿಂದ ನಗರ ಸಂಚಾರಿ ಪೊಲೀಸರು ನಗರದ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣದ ಕಡಗೆ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಿದ್ದಾರೆ.



