ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಚ್ಚುತ್ತಿರುವ ವಿಮಾನ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಗೆ ರಾಜ್ಯ ಸರ್ಕಾರ ವೇಗ ನೀಡಿದೆ. ಯೋಜನೆಯ ಕಾರ್ಯಸಾಧ್ಯತಾ ವರದಿ ಸೆಪ್ಟೆಂಬರ್ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದ್ದು, ಅದರ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.
ನಾಲ್ಕು ಸ್ಥಳಗಳ ಪರಿಶೀಲನೆ
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಈಗಾಗಲೇ ಪ್ರಾಥಮಿಕ ಅಧ್ಯಯನ ಪೂರ್ಣಗೊಳಿಸಿದೆ. ಚೂಡಹಳ್ಳಿ, ಕನಕಪುರ ಸಮೀಪದ ಹರೋಹಳ್ಳಿ, ನೆಲಮಂಗಲ ಸೇರಿದಂತೆ ನಾಲ್ಕು ಸಂಭಾವ್ಯ ಸ್ಥಳಗಳಲ್ಲಿ ತಾಂತ್ರಿಕ, ಆರ್ಥಿಕ ಹಾಗೂ ಪರಿಸರದ ದೃಷ್ಟಿಯಿಂದ ಪರಿಶೀಲನೆ ನಡೆಯುತ್ತಿದೆ.
ಇದನ್ನೂ ಓದಿ:
ದಕ್ಷಿಣ ಬೆಂಗಳೂರಿಗೆ ಹೆಚ್ಚಿನ ಆದ್ಯತೆ
ರಾಜ್ಯ ಸರ್ಕಾರದ ಪ್ರಾಥಮಿಕ ಯೋಜನೆಯಂತೆ, ಹೊಸ ವಿಮಾನ ನಿಲ್ದಾಣವನ್ನು ದಕ್ಷಿಣ ಬೆಂಗಳೂರಿನಲ್ಲಿ ನಿರ್ಮಿಸುವ ಸಾಧ್ಯತೆ ಹೆಚ್ಚಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗುತ್ತಿದೆ.
ಗ್ರಾಮಗಳಿಗೆ ತೊಂದರೆ ಆಗಬಾರದು
ಯೋಜನೆಗಾಗಿ ಯಾವುದೇ ಗ್ರಾಮವನ್ನು ಸ್ಥಳಾಂತರಿಸದಂತೆ ಹಾಗೂ ಭೂಸ್ವಾಧೀನ ವೆಚ್ಚ ಕಡಿಮೆ ಇರುವ ಸ್ಥಳಕ್ಕೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಾಂತ್ರಿಕವಾಗಿ ಸೂಕ್ತ ಮತ್ತು ಕಡಿಮೆ ವೆಚ್ಚದ ಪ್ರದೇಶವನ್ನೇ ಆಯ್ಕೆ ಮಾಡುವತ್ತ ಸರ್ಕಾರ ಗಮನ ಹರಿಸಿದೆ.
ಪ್ರಸ್ತುತ ಯಾವುದೇ ಸ್ಥಳವನ್ನು ಅಂತಿಮಗೊಳಿಸಲಾಗಿಲ್ಲ. ಕಾರ್ಯಸಾಧ್ಯತಾ ವರದಿ ಸಿದ್ಧವಾದ ಬಳಿಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಯೋಜನೆಯ ಮುಂದಿನ ಹಂತದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.



