ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಗಾನಕೋಗಿಲೆ ಎಸ್. ಜಾನಕಿ ನಿಧನಕ್ಕೆ ತೀವ್ರ ಕಂಬನಿ ಮಿಡಿದಿರುವ ಡಿ.ಕೆ. ಶಿವಕುಮಾರ್, ಗಾಯಕಿ ಜಾನಕಿಯಮ್ಮನ ಹೆಸರನ್ನು ಶಾಶ್ವತವಾಗಿ ಉಳಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾನಕಿಯಮ್ಮ ಅವರ 50 ವರ್ಷಗಳ ಸುದೀರ್ಘ ಸಂಗೀತ ಸೇವೆ ಹಾಗೂ 40 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿ ನೀಡಿರುವ ಅವರ ಸಾಧನೆಯನ್ನು ಸ್ಮರಿಸಿದರು.
ಮೈಸೂರಿನಲ್ಲೇ ಅಂತ್ಯಕ್ರಿಯೆ:
ಪಾರ್ಥಿವ ಶರೀರವನ್ನು ಚೆನ್ನೈಗೆ ಕೊಂಡೊಯ್ಯಲು ಸರ್ಕಾರದಿಂದ ಸಕಲ ವ್ಯವಸ್ಥೆ ಕಲ್ಪಿಸುವುದಾಗಿ ಕುಟುಂಬಸ್ಥರಿಗೆ ತಿಳಿಸಲಾಗಿತ್ತು. ಆದರೆ, ಮೈಸೂರಿನಲ್ಲೇ ಅಂತ್ಯಕ್ರಿಯೆ ನಡೆಯಬೇಕು ಎಂಬುದು ಅಜ್ಜಿಯ ಆಸೆಯಾಗಿತ್ತು ಎಂದು ಕುಟುಂಬದವರು ತಿಳಿಸಿದ್ದರಿಂದ ಮೈಸೂರಿನಲ್ಲೇ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗಿದೆ.
ಸಕಲ ಸರ್ಕಾರಿ ಗೌರವ:
ಜಾನಕಿ ಅಮ್ಮನವರ ಅಂತಿಮ ಸಂಸ್ಕಾರವು ಸರ್ಕಾರದ ವತಿಯಿಂದ ಪೂರ್ಣ ಸಕಲ ಸರ್ಕಾರಿ ಗೌರವಗಳೊಂದಿಗೆ ಜರುಗಲಿದೆ. ಕಲಬುರಗಿಗೆ ಹೊರಟಿದ್ದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಪ್ರವಾಸ ರದ್ದುಗೊಳಿಸಿ ಮೈಸೂರಿನಲ್ಲೇ ಇದ್ದು ಎಲ್ಲಾ ವ್ಯವಸ್ಥೆಗಳನ್ನು ನೋಡಿಕೊಳ್ಳಲು ಸೂಚಿಸಲಾಗಿದೆ. ಹಾಗೂ ಜಾನಕಿ ಅಮ್ಮನವರ ನೆನಪನ್ನು ಶಾಶ್ವತವಾಗಿ ಉಳಿಸಲು ಚಿತ್ರರಂಗ ಹಾಗೂ ಗಣ್ಯರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
ಇದನ್ನೂ ಓದಿ:
ಸೂರ್ಯ, ಚಂದ್ರ ಇರೋವರೆಗೂ ಜಾನಕಿ ಅಮ್ಮ ಶಾಶ್ವತ – ವಿಜಯ ಪ್ರಕಾಶ್
ಇದೇ ವೇಳೆ ಜಾನಕಿ ಅಮ್ಮನವರ ಅಗಲಿಕೆಗೆ ಖ್ಯಾತ ಗಾಯಕ ವಿಜಯ ಪ್ರಕಾಶ್ ಭಾವುಕ ಶ್ರದ್ಧಾಂಜಲಿ ಸಲ್ಲಿಸಿದ್ದು, “ಈ ಜಗತ್ತಿನಲ್ಲಿ ಸೂರ್ಯ ಮತ್ತು ಚಂದ್ರ ಎಷ್ಟು ಸತ್ಯವೋ, ಸಂಗೀತ ಲೋಕದಲ್ಲಿ ಜಾನಕಿ ಅಮ್ಮನವರ ದನಿ ಅಷ್ಟೇ ಶಾಶ್ವತ” ಎಂದು ಕಂಬನಿ ಮಿಡಿದಿದ್ದಾರೆ.



