ಹೊಸದಿಗಂತ ವರದಿ ಬೆಳಗಾವಿ:
ಕುಂದಾನಗರಿ ಬೆಳಗಾವಿ ನಗರದಲ್ಲಿ ರೌಡಿಗ್ಯಾಂಗ್ಗಳು ಮತ್ತೆ ಅಟ್ಟಹಾಸ ಮೆರೆದಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ನಗರದ ಪೊಲೀಸ್ ಕಮಿಷನರ್ ಕಚೇರಿಯ ಕೂಗಳತೆಯ ದೂರದಲ್ಲೇ ಇರುವ ಪ್ರತಿಷ್ಠಿತ ಜಿಮ್ಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ ನಡೆದಿದ್ದು, ವ್ಯಕ್ತಿಯೊಬ್ಬ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ರಮ್ಮಿ ಕ್ಲಬ್ನಲ್ಲಿ ಜೂಜಾಡುತ್ತಿದ್ದ ಸುರೇಶ್ ಜಾಲಗಾರ ಎಂಬಾತನೇ ದುಷ್ಕರ್ಮಿಗಳ ಟಾರ್ಗೆಟ್ ಆಗಿದ್ದ ಒಂಟಿ ವ್ಯಕ್ತಿ. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
ಕಮಿಷನರ್ ಕಚೇರಿ ಪಕ್ಕದಲ್ಲೇ ನಡೆದಿದ್ದೇನು?
ಮಾಹಿತಿಯ ಪ್ರಕಾರ, ಒಟ್ಟು ಐದು ಮಂದಿ ದುಷ್ಕರ್ಮಿಗಳ ತಂಡ ಸ್ಕೆಚ್ ಹಾಕಿಕೊಂಡು ಜಿಮ್ಖಾನಾ ಕ್ಲಬ್ಗೆ ಎಂಟ್ರಿ ಕೊಟ್ಟಿತ್ತು. ಇವರಲ್ಲಿ ಇಬ್ಬರು ದುಷ್ಕರ್ಮಿಗಳು ಕ್ಲಬ್ನ ಹೊರಗಡೆ ನಿಂತು ನಿಗಾ ಕಾಯುತ್ತಿದ್ದರೆ, ಉಳಿದ ಮೂವರು ಮಾರಕಾಸ್ತ್ರ ಹಾಗೂ ಗನ್ಗಳೊಂದಿಗೆ ರಾಜಾರೋಷವಾಗಿ ಕ್ಲಬ್ನ ಒಳಗೆ ನುಗ್ಗಿದ್ದಾರೆ. ಅಲ್ಲಿ ರಮ್ಮಿ ಆಟದಲ್ಲಿ ನಿರತನಾಗಿದ್ದ ಸುರೇಶ್ ಜಾಲಗಾರ ಎಂಬಾತನ ಮೇಲೆ ಏಕಾಏಕಿ ಮುಗಿಬಿದ್ದಿದ್ದಾರೆ. ದುಷ್ಕರ್ಮಿಗಳು ಮೊದಲು ಸುರೇಶ್ ತಲೆಗೆ ಗನ್ನಿಂದ ಬಲವಾಗಿ ಕುಕ್ಕಿದ್ದಾರೆ. ತಕ್ಷಣವೇ ಆತನ ಮೇಲೆ ಗುಂಡು ಹಾರಿಸಲು ಮುಂದಾಗಿದ್ದಾರೆ. ಆದರೆ, ಸಮಯಪ್ರಜ್ಞೆ ಮೆರೆದ ಸುರೇಶ್, ಎದುರಿಗಿದ್ದ ದುಷ್ಕರ್ಮಿಯನ್ನು ಜೋರಾಗಿ ತಳ್ಳಿ ಕ್ಷಣಾರ್ಧದಲ್ಲಿ ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾನೆ.
ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿ
ಟಾರ್ಗೆಟ್ ತಪ್ಪಿ ಸುರೇಶ್ ಜಾಲಗಾರ ಜಾಗದಿಂದ ಎಸ್ಕೇಪ್ ಆಗುತ್ತಿದ್ದಂತೆ ಆಕ್ರೋಶಗೊಂಡ ದುಷ್ಕರ್ಮಿಗಳು ಆತನ ಬೆನ್ನಟ್ಟಿದ್ದಾರೆ. ಆದರೆ ಆತ ಸಿಗದಿದ್ದಾಗ, ಕ್ಲಬ್ನಿಂದ ಹೊರಬಂದ ದುಷ್ಕರ್ಮಿಗಳು ಇಡೀ ಆವರಣದಲ್ಲಿ ಭೀತಿ ಸೃಷ್ಟಿಸಲು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಬಳಿಕ ಸ್ಥಳದಲ್ಲಿದ್ದವರೆಲ್ಲ ಬೆದರಿ ಓಡುತ್ತಿದ್ದಂತೆ, ಐದೂ ಜನ ದುಷ್ಕರ್ಮಿಗಳು ಅಲ್ಲಿಂದ ಬೈಕ್ನಲ್ಲಿ ಪರಾರಿಯಾಗಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಅಟ್ಟಹಾಸದ ದೃಶ್ಯ!
ಕ್ಲಬ್ ಒಳಗೆ ದುಷ್ಕರ್ಮಿಗಳು ಗನ್ ಹಿಡಿದು ಅಟ್ಟಹಾಸ ಮೆರೆದ ಇಡೀ ರೋಮಾಂಚನಕಾರಿ ದೃಶ್ಯ ಅಲ್ಲಿನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಶೂಟರ್ಗಳು ಕೈಯಲ್ಲಿ ಗನ್ ಹಿಡಿದು ಸುರೇಶ್ ಬೆನ್ನಟ್ಟುವ ದೃಶ್ಯ ಹಾಗೂ ಸುರೇಶ್ ಅತ್ಯಂತ ಚಾಣಾಕ್ಷತನದಿಂದ ಅವರಿಂದ ತಪ್ಪಿಸಿಕೊಂಡು ಓಡುವ ದೃಶ್ಯಗಳು ಸಿಸಿಟಿವಿ ಫೂಟೇಜ್ನಲ್ಲಿ ಲಭ್ಯವಾಗಿವೆ. ಈ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲೂ ತೀವ್ರ ಸಂಚಲನ ಮೂಡಿಸಿವೆ.
ಸ್ಥಳಕ್ಕೆ ಕಮಿಷನರ್ ಭೇಟಿ:
ಘಟನೆ ನಡೆದ ತಕ್ಷಣವೇ ಎಚ್ಚೆತ್ತ ಬೆಳಗಾವಿ ನಗರ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಅವರು ಹಿರಿಯ ಅಧಿಕಾರಿಗಳ ತಂಡದೊಂದಿಗೆ ಜಿಮ್ಖಾನಾ ಕ್ಲಬ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡಿರುವ ಅವರು, ದುಷ್ಕರ್ಮಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಪೊಲೀಸ್ ಕಮಿಷನರ್ ಕಚೇರಿಯ ಪಕ್ಕದಲ್ಲೇ ಇಷ್ಟೆಲ್ಲಾ ಹೈಡ್ರಾಮಾ ನಡೆದರೂ ಪೊಲೀಸರಿಗೆ ಸುಳಿವು ಸಿಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೊಲೆ ಯತ್ನ ನಡೆದಿದೆಯೇ ಅಥವಾ ಹಣಕಾಸಿನ ವ್ಯವಹಾರ ಕಾರಣವೇ ಎಂಬ ನಿಟ್ಟಿನಲ್ಲಿ ತನಿಖೆ ಚುರುಕುಗೊಂಡಿದೆ.



