ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ, ದಿವಂಗತ ಅಜಿತ್ ಪವಾರ್ ಅವರ ಜನ್ಮದಿನವನ್ನು ಇನ್ಮುಂದೆ ಸರ್ಕಾರಿ ಮಟ್ಟದಲ್ಲೇ ಅಧಿಕೃತವಾಗಿ ಆಚರಿಸಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ರಾಷ್ಟ್ರೀಯ ನಾಯಕರು ಮತ್ತು ಮಹಾನ್ ವ್ಯಕ್ತಿಗಳ ಜನ್ಮದಿನಾಚರಣೆಯ ಅಧಿಕೃತ ಪಟ್ಟಿಗೆ ಅಜಿತ್ ಪವಾರ್ ಅವರ ಹೆಸರನ್ನು ಸೇರಿಸಿ ಇಂದು ಹೊಸ ಸುತ್ತೋಲೆ ಜಾರಿಗೊಳಿಸಲಾಗಿದೆ.
ಎನ್ಸಿಪಿ ನಾಯಕರ ಬೇಡಿಕೆಗೆ ಸಮ್ಮತಿ
ಸುಮಾರು 6 ತಿಂಗಳ ಹಿಂದೆ ಸಂಭವಿಸಿದ ದುರದೃಷ್ಟಕರ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನರಾಗಿದ್ದರು. ಅವರ ಸುದೀರ್ಘ ರಾಜಕೀಯ ಸೇವೆ ಹಾಗೂ ರಾಜ್ಯದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಹಿರಿಯ ಎನ್ಸಿಪಿ ನಾಯಕರಾದ ಛಗನ್ ಭುಜಬಲ್ ಮತ್ತು ಹಸನ್ ಮುಶ್ರಿಫ್ ಅವರು ಮುಖ್ಯಮಂತ್ರಿಯವರಿಗೆ ವಿಶೇಷ ಮನವಿ ಸಲ್ಲಿಸಿದ್ದರು. ಈ ಬೇಡಿಕೆಯನ್ನು ಪುರಸ್ಕರಿಸಿರುವ ಸರ್ಕಾರ, ಜುಲೈ 22 ರಂದು ಅಜಿತ್ ಪವಾರ್ ಅವರ ಮೊದಲ ಜನ್ಮದಿನವನ್ನು ರಾಜ್ಯಾದ್ಯಂತ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದೆ.
ಎಲ್ಲಾ ಶಾಲೆ, ಕಾಲೇಜುಗಳಿಗೂ ಆದೇಶ ಕಡ್ಡಾಯ
ಸರ್ಕಾರದ ಹೊಸ ನಿಯಮದ ಪ್ರಕಾರ, ಜುಲೈ 22 ರಂದು ರಾಜ್ಯದ ಸಚಿವಾಲಯ ಸೇರಿದಂತೆ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ, ಜಿಲ್ಲಾಧಿಕಾರಿ ಕಚೇರಿಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ದಾದಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದು ಕಡ್ಡಾಯವಾಗಿದೆ. ಇದರೊಂದಿಗೆ ಎಲ್ಲಾ ಪ್ರಾಥಮಿಕ, ಮಾಧ್ಯಮಿಕ ಶಾಲೆ ಹಾಗೂ ಕಾಲೇಜುಗಳಲ್ಲಿ ಅವರ ಜೀವನ ಪ್ರಯಾಣವನ್ನು ಪರಿಚಯಿಸುವ ವಿಶೇಷ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆದೇಶಿಸಲಾಗಿದೆ.
ಉಪಮುಖ್ಯಮಂತ್ರಿ, ಹಣಕಾಸು ಮತ್ತು ಜಲಸಂಪನ್ಮೂಲ ಸಚಿವರಾಗಿ ಆಡಳಿತದ ಮೇಲಿದ್ದ ಅವರ ಬಿಗಿ ಹಿಡಿತ ಹಾಗೂ ಶಿಸ್ತಿನ ರಾಜಕಾರಣವನ್ನು ಗೌರವಿಸಲು ಈ ಕ್ರಮ ಕೈಗೊಳ್ಳಲಾಗಿದೆ.



