ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಿಗೆ ಭಕ್ತರು ನೀಡುವ ಕಾಣಿಕೆ ಹಣವನ್ನು ಕೇವಲ ಆಯಾ ದೇವಾಲಯಗಳ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಬಳಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವಾಲಯಗಳ ಆದಾಯ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಸರ್ಕಾರದ ಮುಂದಿನ ಯೋಜನೆಗಳನ್ನು ಹಂಚಿಕೊಂಡಿದ್ದಾರೆ.
ಕಾಣಿಕೆ ಹುಂಡಿಗಳ ಮೇಲೆ ಸಿಸಿಟಿವಿ ಕಣ್ಣು
ರಾಜ್ಯದಲ್ಲಿ ಒಟ್ಟು 39 ಸಾವಿರ ಮುಜರಾಯಿ ದೇವಸ್ಥಾನಗಳಿದ್ದು, ಇವುಗಳಲ್ಲಿ ‘ಎ’ ವರ್ಗದ ದೇವಾಲಯಗಳಿಗೆ ಭಕ್ತರಿಂದ ಗಣನೀಯ ಪ್ರಮಾಣದ ಆದಾಯ ಹರಿದುಬರುತ್ತಿದೆ. ಪ್ರತಿಯೊಂದು ಹುಂಡಿಯ ಸುರಕ್ಷತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು, ನಾಲ್ಕೂ ಕಡೆಯಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಇದನ್ನು ನೇರವಾಗಿ ಮುಜರಾಯಿ ಇಲಾಖೆಯ ಕೇಂದ್ರ ಕಚೇರಿಯಿಂದಲೇ ಲೈವ್ ಆಗಿ ನಿಗಾವಹಿಸುವ ತಂತ್ರಜ್ಞಾನ ವ್ಯವಸ್ಥೆ ಜಾರಿಗೆ ತರಲಾಗುವುದು.
ಇದನ್ನೂ ಓದಿ:
ಹಣ ದುರುಪಯೋಗಕ್ಕೆ ಬ್ರೇಕ್
ಭಕ್ತರು ಶ್ರದ್ಧೆಯಿಂದ ಹುಂಡಿಗೆ ಹಾಕುವ ಪ್ರತಿಯೊಂದು ರೂಪಾಯಿಯೂ ದೇವಾಲಯದ ಮೂಲಸೌಕರ್ಯ ಹಾಗೂ ಭಕ್ತರ ಸೌಲಭ್ಯಗಳಿಗಾಗಿಯೇ ವಿನಿಯೋಗವಾಗಲಿದೆ. ಕಾಣಿಕೆ ಎಣಿಕೆ ಮತ್ತು ಸಂಗ್ರಹಣೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯಲು ಈ ಹೈಟೆಕ್ ಕಣ್ಗಾವಲು ವ್ಯವಸ್ಥೆ ಮೈಲಿಗಲ್ಲಾಗಲಿದೆ ಎಂದು ಡಿಸಿಎಂ ಭರವಸೆ ನೀಡಿದ್ದಾರೆ.



