ಹೊಸದಿಗಂತ ವರದಿ ಮಡಿಕೇರಿ:
ವಿದ್ಯಾರ್ಥಿ ವೇತನ, ಮನೆ ಬಾಡಿಗೆ ಸೇರಿದಂತೆ ಹಲವು ಕಾರಣಗಳನ್ನು ಹೇಳಿ ಬ್ಯಾಂಕ್ ಖಾತೆಗಳನ್ನು ದುರ್ಬಳಕೆ ಮಾಡಿ 35 ಲಕ್ಷ ರೂ.ಗಳಿಗೂ ಅಧಿಕ ಹಣವನ್ನು ವಂಚಿಸಿರುವ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಕೊಡಗು ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಯಸಳೂರು, ಈಚಲಬೀಡು ಗ್ರಾಮದ ನಿವಾಸಿ ಕರಣ್ ಎಂಬಾತನೇ ಬಂಧನಕ್ಕೊಳಗಾದವನು.
ಆರೋಪಿಯು ವಿದ್ಯಾರ್ಥಿ ವೇತನ, ಮನೆ ಸಾಲ ಸೇರಿದಂತೆ ವಿವಿಧ ಕಾರಣಗಳಿಗೆ ಹಲವು ಜನರಿಂದ ಬ್ಯಾಂಕ್ ಖಾತೆಗಳನ್ನು ತೆರೆಸಿ, ಆ ಖಾತೆಗಳನ್ನು ತಾನೇ ನಿರ್ವಹಿಸಿ ಸೈಬರ್ ವಂಚನೆಗೆ ಬಳಸುತ್ತಿದ್ದನೆನ್ನಲಾಗಿದೆ.
ಈ ಸಂಬಂಧ ಜು.13ರಂದು ಪ್ರಕರಣ ದಾಖಲಾಗಿತ್ತು. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ವಿವಿಧ ಖಾತೆಗಳಿಂದ ಸುಮಾರು 35 ಲಕ್ಷ ರೂಪಾಯಿಗೂ ಅಧಿಕ ಹಣದ ವರ್ಗಾವಣೆ ನಡೆದಿರುವುದು ಕಂಡುಬಂದಿದೆ.
ಡಿವೈಎಸ್ಪಿ ಐ.ಪಿ.ಮೇದಪ್ಪ ಮತ್ತು ಸೈಬರ್ ಕ್ರೈಂ ಠಾಣೆ ಸಿಬ್ಬಂದಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಆರೋಪಿಯನ್ನು ಪತ್ತೆ ಮಾಡುವಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಶ್ಲಾಘಿಸಿದ್ದಾರೆ.
ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆಯನ್ನು ಬೇರೆಯವರಿಗೆ ಬಳಸಲು ನೀಡಬಾರದು. ಹಾಗೆ ನೀಡಿದಲ್ಲಿ ಆ ಖಾತೆಗಳನ್ನು ಕಾನೂನು ಬಾಹಿರ ಕೃತ್ಯಗಳಿಗೆ ಬಳಸಿದ್ದು ಕಂಡುಬಂದರೆ ಖಾತೆದಾರರ ವಿರುದ್ಧವೇ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.



