ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ಜಾರಿಯಲ್ಲಿದೆ. ರಸ್ತೆ ಬದಿಯಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಿದ ಬಳಿಕ ಇದೀಗ ಸರ್ಕಾರಿ ಸ್ವಾಮ್ಯದ ಮಳಿಗೆಗಳನ್ನೂ ತೆಗೆಯಲಾಗುತ್ತಿದೆ.
ಬೆಂಗಳೂರಿನಾದ್ಯಂತ ಒಟ್ಟು 1,500 ಕಿ.ಮೀ ಪಾದಚಾರಿ ಮಾರ್ಗವನ್ನು ಒತ್ತುವರಿಯಿಂದ ಮುಕ್ತಗೊಳಿಸುವ ಬೃಹತ್ ಗುರಿ ಹೊಂದಲಾಗಿದ್ದು, ಈಗಾಗಲೇ 500 ಕಿ.ಮೀಗೂ ಹೆಚ್ಚು ಭಾಗವನ್ನು ತೆರವುಗೊಳಿಸಲಾಗಿದೆ. ಹಾಪ್ಕಾಮ್ಸ್ ಹಾಗೂ ನಂದಿನಿ ತಂಟೆಗೆ ಯಾರೂ ಹೋಗುತ್ತಿಲ್ಲ. ಆದರೆ ನಮ್ಮ ಅಂಗಡಿ ತೆಗೆಸಿದ್ದಾರೆ ಎಂದು ವ್ಯಾಪಾರಿಗಳು ಆರೋಪಿಸಿದ್ದರು.
ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಜಿಬಿಎ ಮುಖ್ಯ ಎಂಜಿನಿಯರ್ ಬಸವರಾಜ್ ಕಬಾಡೆ, ನಿಯಮ ಎಲ್ಲರಿಗೂ ಒಂದೇ. ಫುಟ್ಪಾತ್ ಮೇಲಿರುವ ಸರ್ಕಾರಿ ಸ್ವಾಮ್ಯದ ಮಳಿಗೆಗಳನ್ನೂ ತೆರವುಗೊಳಿಸಲು ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ. ನಂದಿನಿ ಬೂತ್, ಹಾಪ್ಕಾಮ್ಸ್ ಹಾಗೂ ಬೆಸ್ಕಾಂನ ಅಪಾಯಕಾರಿ ಎರಡು ಕಂಬಗಳ ಟ್ರಾನ್ಸ್ಫಾರ್ಮರ್ಗಳನ್ನು ಫುಟ್ಪಾತ್ನಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಅಥವಾ ತೆರವುಗೊಳಿಸುವಂತೆ ಸ್ವತಃ ಜಿಬಿಎ ಇಂಜಿನಿಯರ್ಗಳೇ ಸಂಬಂಧಪಟ್ಟ ಇಲಾಖೆಗಳಿಗೆ ಅಧಿಕೃತ ಮನವಿ ಸಲ್ಲಿಕೆ ಮಾಡುತ್ತಿದ್ದಾರೆ.



