July 23, 2026
Thursday, July 23, 2026
spot_img

ಹೈಕಮಾಂಡ್ ಮಟ್ಟದಲ್ಲಿ ಡಿಸಿಎಂ ಹುದ್ದೆ ಜಟಾಪಟಿ: ಕೈ ನಾಯಕರ ದೆಹಲಿ ದಂಡಯಾತ್ರೆ; ಜುಲೈ 29ಕ್ಕೆ ಮಂತ್ರಿಭಾಗ್ಯ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ರಾಜಕೀಯ ಬೆಳವಣಿಗೆಗಳು ತೀವ್ರ ವೇಗ ಪಡೆದುಕೊಂಡಿವೆ. ಹೈಕಮಾಂಡ್ ಮಟ್ಟದಲ್ಲಿ ನಾಯಕರ ಭೇಟಿ ಮತ್ತು ಹೊಸ ಉಪಮುಖ್ಯಮಂತ್ರಿ (DCM) ಸ್ಥಾನಗಳಿಗೆ ಒತ್ತಡ ಕೇಳಿಬರುತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈ 29ರ ಸೋಮವಾರ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಭಾನುವಾರ ಮತ್ತೆ ದೆಹಲಿ ದಂಡಯಾತ್ರೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀಟ್ ಪ್ರತಿಭಟನೆ ಮತ್ತು ಸಂಸತ್ ಅಧಿವೇಶನದಲ್ಲಿ ಬ್ಯುಸಿಯಾಗಿರುವ ಕಾರಣ, ಸದ್ಯಕ್ಕೆ ಸಂಪುಟ ವಿಸ್ತರಣೆ ಪ್ರಕ್ರಿಯೆ ಕೊಂಚ ವಿಳಂಬವಾಗಿದೆ. ಇದರಿಂದಾಗಿ ದೆಹಲಿಗೆ ತೆರಳಿದ್ದ ಸಚಿವಾಕಾಂಕ್ಷಿಗಳು ಬರೀಗೈನಲ್ಲೇ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಆದರೆ, ಮೂಲಗಳ ಪ್ರಕಾರ ಬರುವ ಭಾನುವಾರ (ಜುಲೈ 26) ರಾಜ್ಯ ಕಾಂಗ್ರೆಸ್ ನಾಯಕರು ಮತ್ತೊಮ್ಮೆ ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಅಂತಿಮ ಚರ್ಚೆ ನಡೆಸಲಿದ್ದಾರೆ. ಜುಲೈ 26ರಂದೇ ಪಟ್ಟಿ ಫೈನಲ್ ಆಗಲಿದ್ದು, ಜುಲೈ 27 ಅಥವಾ 29ರಂದು ಪ್ರಮಾಣವಚನ ಪ್ರಕ್ರಿಯೆ ನಡೆಯಬಹುದು ಎನ್ನಲಾಗುತ್ತಿದೆ.

18 ರಿಂದ 19 ಮಂದಿಗೆ ಮಂತ್ರಿಗಿರಿ ಫಿಕ್ಸ್?

ಡಿ.ಕೆ. ಶಿವಕುಮಾರ್ ಸಂಪುಟಕ್ಕೆ ಹೊಸ ರಕ್ತ ತುಂಬಲು ಹೈಕಮಾಂಡ್ ಒಲವು ತೋರಿದ್ದು, ಒಟ್ಟು 18 ರಿಂದ 19 ಹೊಸ ಮುಖಗಳಿಗೆ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ. ಪ್ರಾದೇಶಿಕ ಮತ್ತು ಜಾತಿ ಸಮೀಕರಣದ ಆಧಾರದ ಮೇಲೆ ಮಂತ್ರಿಗಿರಿ ನೀಡಲಾಗುವುದು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:

ಹೆಚ್ಚುವರಿ ಡಿಸಿಎಂ ಸ್ಥಾನಕ್ಕೆ ಹೆಚ್ಚಿದ ಪಟ್ಟು

ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಕೇವಲ ಮಂತ್ರಿಗಿರಿ ಮಾತ್ರವಲ್ಲದೆ, ಹೆಚ್ಚುವರಿಯಾಗಿ ಇನ್ನೆರಡು ಉಪಮುಖ್ಯಮಂತ್ರಿ (DCM) ಸ್ಥಾನಗಳನ್ನು ಸೃಷ್ಟಿಸಬೇಕು ಎಂಬ ಬೇಡಿಕೆ ಬಲವಾಗಿದೆ. ಪ್ರಮುಖ ಸಮುದಾಯಗಳನ್ನು ಒಲಿಸಿಕೊಳ್ಳಲು ಈ ತಂತ್ರ ರೂಪಿಸಲಾಗುತ್ತಿದೆ ಎಂದು ಹೇಳಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !