ಹೊಸದಿಗಂತ ವರದಿ ಚಿತ್ರದುರ್ಗ:
ವಾಣಿ ವಿಲಾಸ ಸಾಗರ ಜಲಾಶಯದಿಂದ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ನೂರಾರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ 367 ಕೋಟಿ ವೆಚ್ಚದ ಬೃಹತ್ ಯೋಜನೆ ಪೂರ್ಣಗೊಂಡಿದ್ದು, ಇನ್ನೂ ಒಂದೂವರೆ ತಿಂಗಳೊಳಗೆ ಸಂಪೂರ್ಣ ತಾಲ್ಲೂಕಿಗೆ ನಿಯಮಿತವಾಗಿ ಶುದ್ಧ ಕುಡಿಯುವ ನೀರು ಪೂರೈಕೆ ಆರಂಭವಾಗಲಿದೆ ಎಂದು ಹೊಳಲ್ಕೆರೆ ಶಾಸಕರಾದ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಶುಕ್ರವಾರ ವಾಣಿ ವಿಲಾಸ ಸಾಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬೃಹತ್ ’ಜಾಕ್ವೆಲ್ʼ ಹಾಗೂ ನೀರೆತ್ತುವ ಕಾಮಗಾರಿ ಶುಕ್ರವಾರ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಳಲ್ಕೆರೆ ಕ್ಷೇತ್ರದ ಜನರಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಮುಂದಿನ 2052ರ ವರೆಗೆ ಹೆಚ್ಚಾಗಬಹುದಾದ ಜನಸಂಖ್ಯೆ ಆಧರಿಸಿ ವಿನ್ಯಾಸಗೊಳಿಸಲಾಗಿದೆ. ಸುಮಾರು ಮೂರೂವರೆಯಿಂದ ನಾಲ್ಕು ವರ್ಷಗಳ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಿ, ಇತ್ತೀಚೆಗೆ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ ಎಂದರು.
ವಿವಿ ಸಾಗರದ ಜಾಕ್ ವೆಲ್ ಜಾಗದಿಂದ ನೀರೊಳಗೆ 100ಅಡಿ ಆಳದಲ್ಲಿ ನೀರಿದೆ. ಆ ನೀರಿನ ಕೆಳಗೆ 40ಅಡಿ ದಪ್ಪದ ಬಂಡೆಯಿದ್ದು, 45 ಅಡಿ ಬಂಡೆಯನ್ನು ಕೊರೆದು ಪೈಪ್ ಪಿಲ್ಲರ್ ಗಳನ್ನು ಸ್ಥಾಪಿಸಲಾಗಿದೆ. ನೀರಿನ ಮಟ್ಟಕ್ಕಿಂತ ಮೇಲೆ 30ಅಡಿ ಎತ್ತರದ ಪಿಲ್ಲರ್ ಗಳನ್ನು ನಿರ್ಮಿಸಿ, ಒಟ್ಟು 170 ಅಡಿ ಎತ್ತರದ ಬೃಹತ್ ಜಾಕ್ ವೆಲ್ ಕಟ್ಟಡ ನಿರ್ಮಿಸಲಾಗಿದೆ ಎಂದು ಹೇಳಿದರು.
24 ಗಂಟೆ ತಡೆಯಿಲ್ಲದ ನೀರು ಪೂರೈಕೆ :
ಈ ಯೋಜನೆಯಲ್ಲಿ 1600 ಹೆಚ್.ಪಿ. ಸಾಮಥ್ರ್ಯದ ಪಂಪ್ಗಳು ಹಾಗೂ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ. ಮೂರು ಪಂಪ್ಗಳ ಪೈಕಿ ಎರಡು ನಿರಂತರವಾಗಿ ಕಾರ್ಯಾಚರಿಸಲಿದ್ದು, ಒಂದು ಪಂಪ್ ಅನ್ನು ತುರ್ತು ಸಂದರ್ಭಕ್ಕಾಗಿ ಕಾಯ್ದಿರಿಸಲಾಗಿದೆ. ಯಾವುದೇ ತಾಂತ್ರಿಕ ಅಡಚಣೆಯಾಗದಂತೆ 24 ಗಂಟೆಯೂ ವರ್ಷದ 365 ದಿನವೂ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ವಾಣಿ ವಿಲಾಸ ಸಾಗರದಿಂದ 25 ಕಿ.ಮೀ. ದೂರದಲ್ಲಿರುವ ಹಾಲೇನಹಳ್ಳಿಯ 60 ಕೋಟಿ ವೆಚ್ಚದ ಫಿಲ್ಟರ್ ಘಟಕಕ್ಕೆ ನೀರನ್ನು ಹಾಯಿಸಿ, ನಂತರ ಗಟ್ಟಿಹೊಸಹಳ್ಳಿ ಗುಡ್ಡದಲ್ಲಿರುವ ಎತ್ತರದ ಪ್ರದೇಶಕ್ಕೆ ಲಿಫ್ಟ್ ಮಾಡಲಾಗುತ್ತದೆ. ಗಟ್ಟಿಹೊಸಹಳ್ಳಿಯಿಂದ ಇಡೀ ತಾಲೂಕಿಗೆ ಗುರುತ್ವಾಕರ್ಷಣೆ ಆಧಾರದ ಮೇಲೆ 625 ಕಿ.ಮೀ ಉದ್ದದ ಬೃಹತ್ ಪೈಪ್ಲೈನ್ ಜಾಲದ ಮೂಲಕ ನೀರು ಹರಿಸಲಾಗುತ್ತದೆ ಎಂದು ತಿಳಿಸಿದರು.
400ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು :
ಹೊಳಲ್ಕೆರೆ ತಾಲ್ಲೂಕಿನ ಸಣ್ಣ ಗ್ರಾಮಗಳು, ದೊಡ್ಡ ಗ್ರಾಮಗಳು ಹಾಗೂ ಹಟ್ಟಿಗಳು ಸೇರಿದಂತೆ ಒಟ್ಟು 400ಕ್ಕೂ ಹೆಚ್ಚು ಜನವಸತಿ ಪ್ರದೇಶಗಳಿಗೆ ಈ ಯೋಜನೆಯಿಂದ ನೀರು ತಲುಪಲಿದೆ. ಹೊಳಲ್ಕೆರೆ ಟೌನ್ಗೆ 25ಕೋಟಿ ರೂ. ವೆಚ್ಚದಲ್ಲಿ ಪ್ರತ್ಯೇಕ ಪೈಪ್ಲೈನ್ ಜಾಲ ರೂಪಿಸಲಾಗಿದ್ದು, ನಿರಂತರ ಕುಡಿಯುವ ನೀರು ಸಿಗಲಿದೆ.
ಇದನ್ನೂ ಓದಿ:
300 ಕೋಟಿ ರೂ ವೆಚ್ಚದಲ್ಲಿ ಪವರ್ ಸ್ಟೇಷನ್:
ಕ್ಷೇತ್ರದ ರೈತರಿಗೆ ವಿದ್ಯುತ್ ಸಮಸ್ಯೆ ಎದುರಾಗದಂತೆ ಜೋಗ್ ಫಾಲ್ಸ್ನಿಂದ ವಿದ್ಯುತ್ ತಂದು ಭರಮಸಾಗರ ಮತ್ತು ಹೊಳಲ್ಕೆರೆ ಭಾಗದಲ್ಲಿ 300 ಕೋಟಿ ರೂ. ವೆಚ್ಚದಲ್ಲಿ 220 ಕೆವಿಎ ಸಾಮಥ್ರ್ಯದ ಬೃಹತ್ ವಿದ್ಯುತ್ ಉಪಕೇಂದ್ರ ನಿರ್ಮಿಸಲಾಗುತ್ತಿದೆ. ಕ್ಷೇತ್ರದ ಜನತೆ ಐದು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದು, ಅವರ ಋಣ ತೀರಿಸಲು ಮೊದಲ ಹಂತದಲ್ಲಿ ಕುಡಿಯುವ ನೀರು ಯೋಜನೆ ಪೂರ್ಣಗೊಳಿಸಿದ್ದೇನೆ. ಮುಂದಿನ ದಿನಗಳಲ್ಲಿ ಕೆರೆ ತುಂಬಿಸುವ ಯೋಜನೆ ಹಾಗೂ ರಸ್ತೆ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಸಿ.ರಘು ಚಂದನ್, ಕುಮಾರ್, ಸಿದ್ದೇಶ್, ಡಿ.ಸಿ.ಮೋಹನ್, ತಿಪ್ಪೇಸ್ವಾಮಿ, ಈಶಣ್ಣ, ರಮೇಶ್, ಪ್ರವೀಣ್, ರಂಗಸ್ವಾಮಿ, ನಿತಿನ್, ಬಂಗಾರಪ್ಪ, ನಾಗರಾಜ್ ಶಿವಪುರ, ಚಿತ್ರಹಳ್ಳಿ ದೇವರಾಜ್ ಸೇರಿದಂತೆ ಮತ್ತಿರರು ಹಾಜರಿದ್ದರು.



