ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈಲ್ವೆ ಜಾಗ ಮತ್ತು ಹಳಿಗಳ ಪಕ್ಕದಲ್ಲಿ ಸಾರ್ವಜನಿಕರು ಹಾಗೂ ವಾಣಿಜ್ಯ ಸಂಸ್ಥೆಗಳು ತ್ಯಾಜ್ಯ ಎಸೆಯುವುದನ್ನು ತಡೆಯಲು ನೈರುತ್ಯ ರೈಲ್ವೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. ನಿಯಮ ಉಲ್ಲಂಘಿಸಿ ಕಸ ಎಸೆಯುವವರಿಗೆ ಭಾರಿ ದಂಡ ವಿಧಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಎರಡು ತಿಂಗಳ ಬೃಹತ್ ಜಂಟಿ ಕಾರ್ಯಾಚರಣೆ
ಸಿಲಿಕಾನ್ ಸಿಟಿಯ ರೈಲ್ವೆ ಮಾರ್ಗಗಳ ಸುತ್ತಮುತ್ತ ಶೇಖರಣೆಯಾಗಿರುವ ಕಸವನ್ನು ಸಂಪೂರ್ಣವಾಗಿ ತೆರವುಗೊಳಿಸಲು ನೈರುತ್ಯ ರೈಲ್ವೆಯು ಜಿಬಿಎ ಮತ್ತು ಸ್ಥಳೀಯ ಮಹಾನಗರ ಪಾಲಿಕೆಗಳ ಸಹಯೋಗದೊಂದಿಗೆ ಕೈಜೋಡಿಸಿದೆ. ಮುಂದಿನ ಎರಡು ತಿಂಗಳುಗಳ ಕಾಲ ಬೆಂಗಳೂರಿನ ಎಲ್ಲಾ ಪ್ರಮುಖ ರೈಲ್ವೆ ಹಳಿಗಳ ಪಕ್ಕದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
ಸಿಸಿಟಿವಿ ಕಣ್ಗಾವಲು ಮತ್ತು ಕಠಿಣ ಕಾನೂನು ಕ್ರಮ
ರೈಲ್ವೆ ಆವರಣವನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ಕಸ ಹಾಕುವ ಕಪ್ಪು ಗುರುತಿಸಲಾಗುತ್ತಿದ್ದು, ಅಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ಇಡಲಾಗುವುದು. ಹಳಿಗಳ ಪಕ್ಕದಲ್ಲಿ ಕಸ ಸುರಿಯುವವರ ವಿರುದ್ಧ ಪರಿಸರ ಸಂರಕ್ಷಣಾ ಕಾಯ್ದೆ ಹಾಗೂ ರೈಲ್ವೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:
ನಗರದ ಸೌಂದರ್ಯ ಮತ್ತು ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದ ಸಾರ್ವಜನಿಕರು ರೈಲ್ವೆ ಹಳಿಗಳ ಮೇಲೆ ಅಥವಾ ಪಕ್ಕದಲ್ಲಿ ತ್ಯಾಜ್ಯವನ್ನು ಎಸೆಯದೆ, ಈ ಸ್ವಚ್ಛತಾ ಅಭಿಯಾನಕ್ಕೆ ಸಹಕರಿಸಬೇಕು ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ಮನವಿ ಮಾಡಿದೆ



